ಎಂಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧; ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆಯಲ್ಲಿ ವಾಣಿಜ್ಯ  ಶಾಸ್ತ್ರ ವಿಭಾಗದ ದ್ವಿತೀಯ ವರ್ಷದ ಎಂಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವು ವಿಜೃಂಭಣೆಯಿಂದ ಜರುಗಿತು. ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ಹಾಗೂ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಮಂಜಣ್ಣ ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ಮಾತುಗಳನ್ನಾಡಿದರು. ಅವರು  ವಿದ್ಯಾರ್ಥಿಗಳಿಗೆ ಭವಿಷ್ಯದ ಕುರಿತು ಪ್ರಾಮುಖ್ಯ ಸಲಹೆಗಳನ್ನು ನೀಡಿದರು ಮತ್ತು ವಿದ್ಯಾಭ್ಯಾಸದ ಮಹತ್ವವನ್ನು ಉತ್ತೇಜಿಸಿದರು. ಪದವಿಯಲ್ಲಿ ಕಲಿತ ಶಿಕ್ಷಣವನ್ನು ಸಾರ್ವಜನಿಕವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.ವಿಭಾಗದ ಅಧ್ಯಾಪಕರಾದ ಡಾ.ವೆಂಕಟೇಶ್ ಬಾಬು ಎಸ್. ಅವರು  ಮಾತನಾಡುತ್ತಾ  ಪದವಿ ಶಿಕ್ಷಣದ ಮಹತ್ವ ಮತ್ತು ವಿದ್ಯಾರ್ಥಿಗಳ ಮುಂದಿನ ಜೀವನದ ಕುರಿತು ಸಲಹೆಗಳನ್ನು ನೀಡಿದರು. ಅವರು, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜದಲ್ಲಿ ಹೇಗೆ ಪ್ರಯೋಗಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು ಹಾಗೂ ತಾಂತ್ರಿಕತೆ ಮತ್ತು ನೈತಿಕತೆಯ ನಡುವಿನ ಸಮತೋಲನವನ್ನು ಸಾಧಿಸುವುದು ಇಂದಿನ ಕಾಲದ ಅಗತ್ಯವಾಯಿತು ಎಂದು ಸೂಚಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ ನಾಗರಾಜ್ ಆರ್ ಸಿ ರವರು ಪದವಿ ಪ್ರದಾನ  ಸಮಾರಂಭದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸಿ. ಕೆ. ಕೊಟ್ರಪ್ಪ ನವರು ವಹಿಸಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಒಂದಿಷ್ಟು ಇತರ ಜ್ಞಾನಗಳನ್ನು ಪಡೆದು ಮುಂದಿನ ಬದುಕನ್ನು ಕಟ್ಟಿ ಕೊಳ್ಳಬೇಕೆಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ, ಡಾ ಮಂಜುನಾಥ್ ಜೆ. ಎಂ., ಡಾ ಶಂಭುಲಿಂಗಪ್ಪ, ಮತ್ತು ಡಾ ಯಶೋಧ ಆರ್. ಅವರು ವಿದ್ಯಾರ್ಥಿಗಳಿಗೆ ತಮ್ಮ ಯಶಸ್ವಿ ಜೀವನಕ್ಕೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಿದರು.