ನಮ್ಮ ಕಣಕಣಗಳಲ್ಲೂ ದೇವರಿದ್ದಾನೆ: ರಾಘವೇಶ್ವರ ಶ್ರೀ
ಗೋಕರ್ಣ: ದೇಹ ಎನ್ನುವುದು ದೇವಾಲಯ; ದೇಹದ ಪ್ರತಿ ಅಂಗದಲ್ಲಿ, ಕಣ ಕಣದಲ್ಲೂ ದೇವರಿದ್ದಾನೆ. ಆಯಾ ಅಂಗಗಳನ್ನು ದುರುಪಯೋಗ ಮಾಡಿದರೆ ಖಂಡಿತವಾಗಿಯೂ ಆಯಾ ಭಾಗದ ದೇವರು ಕೋಪ ತಾಳುತ್ತಾರೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ೪೦ನೇ ದಿನವಾದ ಗುರುವಾರ ’ಕಾಲ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ಅನುಗ್ರಹಿಸಿದರು. ನಾವು ಪರರಿಗೆ ಮಾಡುವುದನ್ನೇ ದೇವರು ನಮಗೆ ಪ್ರತಿಫಲ ನೀಡುತ್ತಾನೆ ಎಂದರು.
ಜೀವನದಲ್ಲಿ ತಪ್ಪು, ಅನ್ಯಾಯ ಮಾಡಬಾರದು; ಮಾಡಿದರೆ ನಮ್ಮೊಳಗಿನ ದೇವರು ನಮಗೆ ಅದೇ ಫಲ ನೀಡುತ್ತಾನೆ. ಏಕೆಂದರೆ ದೇವತೆಗಳು ದೂರದೆಲ್ಲೆಲ್ಲೂ ಇಲ್ಲ; ಉಗುರ ತುದಿಯಿಂದ ಕೂದಲ ವರೆಗೆ ಪ್ರತಿಯೊಂದು ಅವಯವ ಅಂಗಾಂಗಗಳು ಕೂಡಾ ದೇವಮಯ. ಆದ್ದರಿಂದ ಯಾವ ಅಂಗಾಂಗವನ್ನು ದುರುಪಯೋಗ ಮಾಡಿದರೆ, ಇನ್ನೊಬ್ಬರಿಗೆ ಪೀಡೆ ಅಥವಾ ಹಿಂಸೆ ಮಾಡಿದಾಗ ಮತ್ತೆ ನಮಗೇ ಅದು ಹಿಂದಿರುತ್ತದೆ ಎಂದು ಹೇಳಿದರು.
ಜಾತಕದಲ್ಲಿ ರವಿಗ್ರಹದ ದೋಷವಿದ್ದರೆ, ಉಷ್ಣಜ್ವರ, ತಾಪ, ದೇಹಪತನ, ಅಪಸ್ಮಾರ, ಹೃದ್ರೋಗ, ಹೊಟ್ಟೆ ನೋವು, ಚರ್ಮರೋಗ, ಮೂಳೆ ಕಾಯಿಲೆಗಳು ಮತ್ತು ಕುಷ್ಟರೋಗದ ಸಾಧ್ಯತೆಗಳಿವೆ. ನಿದ್ರಾಕಾರಕ ಗ್ರಹನಾದ ಚಂದ್ರನ ಕೋಪದೊಂದ ನಿದ್ದೆನಾಶ, ಅತಿಬೇಧಿ, ಗುಳ್ಳೆಗಳೇಳುವ ವ್ಯಾಧಿ, ಶೀತಜ್ವರ, ಅಗ್ನಿಮಾಂದ್ಯ, ಉದಕಭೀತಿ, ಕೃಶಕಾ, ಕಾಮಲೆ, ರಕ್ತಸಂಬಂಧಿ ಕಾಯಿಲೆಗಳು, ಚೇತಶ್ಯಾಂತಿ, ಬಾಲಗ್ರಹ ಸಾಧ್ಯತೆ ಇದೆ ಎಂದು ವಿವರಿಸಿದರು.
ಪಿತ್ತಕಾರಕ ಕುಜನಿಂದ ನೀರಡಿಕೆ, ಪಿತ್ತಜ್ವರ, ಊಧ್ವಾಂಗರೋಗ, ರಕ್ತಹೀನತೆ, ದೇಹಭಂಗ, ಬೆಂಕಿ, ವಿಷ, ಆಯುಧಗಳ ಸಮಸ್ಯೆ ಉದ್ಭವಿಸುತ್ತದೆ. ಬುಧನಿಂದ ಬುದ್ಧಿಬ್ರಾಂತಿ, ವಾಕ್ ದೋಷ, ಕಣ್ಣಿನ ರೋಗಗಳು, ಮೂಗಿನ ರೋಗಗಳು, ಚರ್ಮರೋಗ ಬರುತ್ತದೆ. ಕಫದ ಕಾರಣದಿಂದ ಬರುವ ರೋಗಗಳಿಗೆ ಗುರುಕಾರಣ. ಜತೆಗೆ ಕರುಳುಜ್ವರ, ಪ್ರಮೇಹ, ಕಿವಿರೋಗಗಳು, ಶೋಕ- ಮೋಹ ರೋಗಗಳು ಬರುತ್ತವೆ ಎಂದು ವಿಶ್ಲೇಷಿಸಿದರು.
ಕಣ್ಣಿನ ರೋಗಗಳು, ಗುಹ್ಯರೋಗಗಳು, ಮುಖರೋಗಗಳು, ಮೂತ್ರಕೃಚ್ಠ್ಜ, ದೇಹಕಾಂತಿ ವಿಹಕ, ಪಾಂಡು, ಬಾವು ಬರುವ ರೋಗಗಳು ಶುಕ್ರನ ಕೋಪಬದಿಂದ ಬರುತ್ತದೆ. ವಾತವಿಕಾರ, ಪಾದನೋವು, ಭ್ರಾಂತಿ, ವೇದನೆಗೆ ಶನಿಕಾರಣ ಎಂದರು.
ಅನಾವರಣದ ಬಗ್ಗೆ ಪ್ರಸ್ತಾವಿಸಿದ ಶ್ರೀಗಳು, ಭಾವ ತುಂಬಿಬಂದಾಗ ಭಾಷೆ ಮೌನವಾಗುತ್ತದೆ. ಶಿಶಿರನ ನೆನಪಾದಾಗ ಇದು ಸತ್ಯ ಎನಿಸುತ್ತದೆ. ಅಂಥ ಅಪರೂಪದ ಕಾರ್ಯಕರ್ತ. ಸತ್ಯಧರ್ಮದಲ್ಲಿ ಬದುಕ್ಕಿದ್ದವರ ಮುಂದಿನ ಬದುಕು ಹೂವಿನ ಹಾದಿಯಾಗಿರುತ್ತದೆ. ಆಯಸ್ಸಿನ ನಂತರ ಏನಾಗಿದ್ದಾರೆ ಎನ್ನುವುದು ಮುಖ್ಯ. ಜೀವನದಲ್ಲಿ ಒಂದು ತಪ್ಪುಹೆಜ್ಜೆಯನ್ನೂ ಇಡದ ವ್ಯಕ್ತಿ. ಜನ್ಮಸಹಜವಾಗಿಯೇ ಆಧ್ಯಾತ್ಮಿಕತೆ ಇತ್ತು. ತ್ಯಾಗ, ಸಮರ್ಪಣೆಯಲ್ಲಿ ಸರಿಸಾಟಿ ಇಲ್ಲದ ಕಾರ್ಯಕರ್ತ ಎಂದು ಬಣ್ಣಿಸಿದರು.
ಶ್ರೀಮಠದ ಅಪೂರ್ವ ಸೇವಾಬಿಂದು ಶಿಶಿರ ಹೆಗಡೆ ಅಂಗಡಿ ಅವರ ಸೇವಾವೈಭವದ ಅನಾವರಣವನ್ನು ಶ್ರೀಸಂಸ್ಥಾನದವರು ಮಂಜುನಾಥ ಹೆಗಡೆ- ವಿಜಯಲಕ್ಷ್ಮಿ ದಂಪತಿಯ ಸಮ್ಮುಖದಲ್ಲಿ ನೆರವೇರಿಸಿದರು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಗುರುವಾರ ಚಾತುರ್ಮಾಸ್ಯ ವ್ರತನಿರತರಾದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸಮಿತಿಯ ಜಿ.ವಿ.ಹೆಗಡೆ, ವಿವಿವಿ ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ, ಡಾ.ರವಿ ಪಾಂಡವಪುರ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.