ಅ.ಭಾ ವಿಶ್ವವಿದ್ಯಾಲಯಗಳ ನೌಕರರ ಒಕ್ಕೂಟದಿಂದ ಪ್ರಧಾನಿಗೆ ಮನವಿ
ಬೀದರ,ಆ.29:ದೇಶದ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಸ್ತ ಬೋಧಕೇತರ ನೌಕರರುಗಳಿಗೆ ಯುಜಿಸಿ ವೇತನವನ್ನು ನೀಡಿ, ಶಿಕ್ಷಕ – ಶಿಕ್ಷಕೇತರರ ಮಧ್ಯದಲ್ಲಿರುವ ವೇತನ ತಾರತಮ್ಯವನ್ನು ಸರಿಪಡಿಸಬೇಕೆಂದು ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಪ್ಪ ಉಪ್ಪಿನ ಅವರು ಕೇಂದ್ರ ಸರಕಾರಕ್ಕೆ ಆಗ್ರಹಿಸಿದರು.
ಅವರು ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದಿಂದ, ಪಶು ವಿ.ವಿ. ಯಲ್ಲಿ ಬೇಡಿಕೆ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆ ಈ ಮೂರು ಉದ್ದೇಶಗಳ ಕ್ರಿಯಾನ್ವಯ ಕ್ಕಾಗಿ ವಿಶ್ವ ವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ನೌಕರರು ಸಮಾನವಾಗಿ ದುಡಿಯುತ್ತಾರೆ. ಆದರೆ ಬೋಧಕರಿಗೆ ಯುಜಿಸಿ ವೇತನ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರದ ವೇತನ ಶ್ರೇಣಿಯನ್ನು ನೀಡುತ್ತಿರುವುದು ತಾರತಮ್ಯವಾಗಿದ್ದು, ಇದು ಬೋಧಕೇತರ ನೌಕರರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಇದನ್ನು ತಕ್ಷಣವೇ ಸರಿಪಡಿಸಬೇಕು.
ಮುಂದುವರೆದು, ದೇಶಿಯ ಉತ್ಪನ್ನದ ಶೇ6 ರಷ್ಟು ಹಣವನ್ನು ಸರ್ಕಾರಿ ಅನುದಾನಿತ ವಿವಿ ಗಳಿಗೆ ಹಂಚಿಕೆ ಮಾಡಬೇಕು, ಹಳೇ ಪಿಂಚಣಿ ಮರು ಜಾರಿ ಹಾಗೂ ಗುತ್ತಿಗೆ ಆಧಾರಿತ ನೌಕರರ ಸೇವಾ ಭದ್ರತೆಯನ್ನು ಸುನಿಶ್ಚಿತ ಗೊಳಿಸಬೇಕೆಂದು ಒತ್ತಾಯಿ ಸಿದರು. ಈ ಸಂಬಂಧದ ಮನವಿಯನ್ನು ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಶಿಕ್ಷಣ ಸಚಿವರಿಗೆ (ವಿ.ವಿ. ಕುಲ ಪತಿಗಳ ಮುಖಾಂತರ) ಸಲ್ಲಿಸಲಾಯಿತು. ಹಿರಿಯ ಆಪ್ತ ಕಾರ್ಯದರ್ಶಿ ನಾಗಭೂಷಣ್ ಹುಗ್ಗೆ, ನಾಗೇಂದ್ರ, ಬಾಬಾಗೌಡ ಬಿರಾದಾರ, ವೈದ್ಯರಾಜ, ವಿಥೋಬಾ, ರವಿ ಸಿರ್ಮಾ, ಸಾವನ, ಪ್ರವೀಣ್, ಗುರುಸಿದ್ದ ಸ್ವಾಮಿ ಮುಂತಾದವರು ಭಾಗವಹಿಸಿದ್ದರು.