ಕೋಟಿ ಜಪದ ಸಂಕಲ್ಪದ ಫಲವೇ ಗಣೇಶ ಮೂರ್ತಿ ಸ್ಥಾಪನೆ : ನಳಿನಿ ಪಾಟೀಲ
ಬೀದರ:ಆ.29: ಗಣೇಶ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ಏಳನೇ ವಾರ್ಷಿಕೋತ್ಸವದ ಪ್ರಯುಕ್ತ ಗಣೇಶ ಮೈದಾನದಲ್ಲಿರುವ ವಿಘ್ನೇಶ್ವರನಿಗೆ ವಿಶೇಷವಾಗಿ ಲಡ್ಡುಪ್ರಸಾದ ಸಮರ್ಪಣೆ ಮಾಡಲಾಯಿತು. ಬುಧವಾರ ಬೆಳಿಗ್ಗೆಯಿಂದ ಹೋಮ-ಹವನ, ಪಲ್ಲಕ್ಕಿ ಮೆರವಣಿಗೆ, ಕುಂಭ-ಕಳಶ ಮೆರವಣಿಗೆ ಹಾಗೂ ಮಹಾಪ್ರಸಾದ ಸಂಪನ್ನಗೊಂಡಿದೆ ಎಂದು ಸಮಿತಿಯ ಪ್ರಮುಖರಾದ ಶ್ರೀಮತಿ ನಳಿನಿ ರಾಜಶೇಖರ ಪಾಟೀಲ ತಿಳಿಸಿದರು.
ನಗರದ ಗಣೇಶ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಏಳನೇ ವಾರ್ಷಿಕೋತ್ಸವವನ್ನು ಗಣೇಶ ಮೈದಾನ ಮಹಿಳಾ ಸಮಿತಿ ವತಿಯಿಂದ ಆಚರಣೆ ಮಾಡಿ, ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಹಲವು ದಿವಸಗಳಿಂದ ಗಣೇಶನ ಮಂದಿರದಲ್ಲಿ ಮೂರ್ತಿಯೇ ಇರಲಿಲ್ಲ. ಹೀಗಾಗಿ ಮಹಿಳೆಯರೆಲ್ಲರೂ ಸೇರಿ ಕೋಟಿ ಮಂತ್ರಜಪ ಮಾಡುವ ಸಂಕಲ್ಪ ಮಾಡಿದೇವು. ಕೋಟಿ ಮಂತ್ರ ಜನಪದ ಸತ್‍ಸಂಕಲ್ಪವೇ ಮೂರ್ತಿ ಸ್ಥಾಪನೆಗೆ ಕಾರಣವಾಯಿತು. ಹೀಗಾಗಿ 2017ರಲ್ಲಿ ಸುಂದರ ಗಣೇಶ ವಿಗ್ರಹ ಸ್ಥಾಪನೆ ಮಾಡಲಾಯಿತು. ಪ್ರತೀ ವರ್ಷ ಒಂದೊಂದು ರೀತಿಯ ವಿಶೇಷ ಪ್ರಸಾದವನ್ನು ಸಮಿತಿ ವತಿಯಿಂದ ಗಣೇಶನಿಗೆ ಸಮರ್ಪಣೆ ಮಾಡುವ ವಾಡಿಕೆ ನಮ್ಮಲ್ಲಿದೆ. ಈ ಬಾರಿ ಲಡ್ಡುಪ್ರಸಾದ ಸಮರ್ಪಣೆ ಮಾಡಲಾಗಿದೆ ಎಂದರು.
ಸಮಿತಿಯ ಹಿರಿಯರಾದ ವಿಮಲಬಾಯಿ ಫುಲೇಕರ್ ಮಾತನಾಡಿ ಗಣೇಶ ಮಂದಿರ ಕೆಡವಬೇಕು ಎಂದುಕೊಂಡ ಸಂದಿಗ್ಧ ಸಂದರ್ಭದಲ್ಲಿ ಶರಣಪ್ಪ ಫುಲೇಕರ್ ಅವರ ನೇತೃತ್ವದಲ್ಲಿ ಕಾಣಿಕೆ ಸಂಗ್ರಹಿಸಿ, 2017ರಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಮಹಿಳಾ ಸೇವಾ ಸಮಿತಿ ವತಿಯಿಂದ ಪ್ರತೀ ವರ್ಷ ಭಜನೆ, ಕೀರ್ತನೆ, ಪೂಜೆ, ಅಭಿಷೇಕ ಮಾಡಿಕೊಂಡು ಬರಲಾಗುತ್ತಿದೆ. ಮಂದಿರ ಈಗ ಬೆಳೆದು ನಿಂತಿದೆ. ಎಲ್ಲರ ಇಷ್ಠಾರ್ಥಗಳು ಪೂರೈಸಿವೆ ಎಂದು ಹೇಳಿದರು.
ಶ್ರಾವಣ ಮಾಸದ ಪ್ರಯುಕ್ತ ಗಣೇಶ ಮೈದಾನದ ಗಣೇಶ ಮಂದಿರದಲ್ಲಿ ಕಲಾವಿದ ಪ್ರಕಾಶ ಕುಲಕರ್ಣಿ ಮುಗನೂರ ಅವರ ತಂಡದಿಂದ ಒಂದು ತಿಂಗಳ ಕಾಲ ಭಜನೆ, ಹಾಸ್ಯ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ 1 ರಿಂದ ಸಾ. 7ರ ವರೆಗೆ ವಿಶೇಷವಾಗಿ ಗೋಧಿ ಹುಗ್ಗಿ, ಅನ್ನ ಸಂಬಾರು ಮಹಾಪ್ರಸಾದವನ್ನು ಭಕ್ತಾದಿಗಳು ಸವಿದು ಧನ್ಯರಾದರು. ಇದೇ ಸಂದರ್ಭದಲ್ಲಿ ಗಣೇಶ ಮೈದಾನ ಮಹಿಳಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.