ವಿಜೃಂಭಣೆಯಿಂದ ಜರುಗಿದ ಬಾಂವಿ ಬಸವೇಶ್ವರ ರಥೋತ್ಸವ
ಕೊಲ್ಹಾರ:ಆ.27: ತಾಲೂಕಿನ ಹಣಮಾಪೂರ ಹಾಗೂ ಬಳೂತಿ ಗ್ರಾಮಗಳ ಆರಾಧ್ಯ ದೈವ ಸುಕ್ಷೇತ್ರ ಬಾಂವಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ರಥೋತ್ಸವವು ಅಪಾರ ಸಂಖ್ಯೆಯ ಭಕ್ತ ಸಮೂಹದ ಮದ್ಯದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.
ಸೋಮವಾರ ಬಾವಿ ಬಸವೇಶ್ವರ ಅರ್ಚಕರಾದ ಸಂಗಯ್ಯ ಚಿಕ್ಕಮಠರವರಿಂದ ಬೆಳಿಗ್ಗೆ 8ಗಂಟೆಯಿಂದ 10ಗಂಟೆವರೆಗೆ ಬಾಂವಿ ಬಸವೇಶ್ವರನಿಗೆ ರುದ್ರಾಭಿಷೇಕ ಜರುಗಿತು.ನಂತರ ಬಳೂತಿ ಗ್ರಾಮದಿಂದ ದೇವಸ್ಥಾನದವರೆಗೆ ಸಕಲ ವಾದ್ಯ ವೈಭವಗಳೊಂದಿಗೆ ಬಸವೇಶ್ವರ ಬೆಳ್ಳಿ ಮೂರ್ತಿಯನ್ನು ಮೆರವಣಿಗೆ ಮೂಲಕ ಬರಮಾಡಿಕೊಂಡು ಮೂಲ ನಂದಿಶ್ವರನಿಗೆ ಬೆಳ್ಳಿ ಮೂರ್ತಿಯನ್ನು ತೋಡಿಸಲಾಯಿತು.ಮದ್ಯಾಹ್ನ 3 ಗಂಟೆಯಿಂದ ಹಣಮಾಪೂರ ಗ್ರಾಮದ ಸಕಲ ಸದ್ಭಕ್ತರಿಂದ ಬಹು ವರ್ಷಗಳ ನಂತರ ನಿರ್ಮಿಸಿದ ನಂದಿಕೋಲು ಹಾಗೂ ರಥೋತ್ಸವದ ಹಗ್ಗ ಹಾಗೂ ಕಳಸಗಳನ್ನು ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು. ನಂತರ ಕಳಸ ಹಾಗೂ ಹಗ್ಗಗಳಿಗೆ ಪೂಜೆ ಸಲ್ಲಿಸಿ ದೇವಸ್ಥಾನ ಹಾಗೂ ರಥೋತ್ಸವದ ಮೇಲೆ ಕಳಸಗಳನ್ನು ಪ್ರತಿಷ್ಟಾಪನೆ ಮಾಡಲಾಯಿತು. ನಂತರ ಹಣಮಾಪೂರ, ಬಳೂತಿ, ಕೊಲ್ಹಾರ, ಮಟ್ಟಿಹಾಳ ಸೇರಿದಂತೆ ಅನೇಕ ಸುತ್ತ ಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತ ಸಮೂಹ ಮಧ್ಯದಲ್ಲಿ ಬಾಂವಿ ಬಸವೇಶ್ವರ ರಥೋತ್ಸವ ಬಹಳ ವೈಭವದಿಂದ ಜರುಗಿತು. ರಥೋತ್ಸವ ಸಂದರ್ಭದಲ್ಲಿ ಮಹಿಳೆಯರು ರಥೋತ್ಸವಕ್ಕೆ ಪುಷ್ಪಾರ್ಚನೆ ಗೈದು ಹರಕೆ ತೀರಿಸಿದ್ದು ಕಂಡು ಬಂದಿತು. ಪೈಲ್ವಾನ್ರಿಂದ ಜಂಗಿ ಕುಸ್ತಿಗಳು ಜರುಗಿದವು.