ಗೋ ಪಾಲನೆಗೆ ಸರ್ಕಾರ ಸಬ್ಸಿಡಿ ನೀಡಬೇಕು: ಶ್ರೀ ಕೃಷ್ಣ ಚೈತನ್ಯದಾಸ ಪ್ರಭು
ಬೀದರ: ಆ.27:ಮಹಾತ್ಮಿಕರು ಜಗದ ಸಮಸ್ಯೆಗಳನ್ನು ನಿವಾರಿಸಲು ಹುಟ್ಟಿ ಬರುವುದರಿಂದ ಅವರ ಜನ್ಮ ದಿನಾಚರಣೆಗೆ ಮಹತ್ವವಿರುತ್ತದೆ. ಅದರಲ್ಲೂ ಅವತಾರಿ ಪುರುಷರು ಅಧರ್ಮ ಹೆಚ್ಚಾದಾಗ ಧರ್ಮದ ಪಕ್ಷವಹಿಸಿ, ಅಧರ್ಮದ ನಾಶಗೈಯಲು ಹುಟ್ಟಿ ಬರುತ್ತಾರೆ. ಶ್ರೀ ಕೃಷ್ಣನ ಕಾಲದಲ್ಲೂ ಅಸುರರು ದೇವರ ದೇವಮಾನವರ ಮತ್ತು ಭೂಮಿಯ ಮೇಲೆ ಅತ್ಯಾಚಾರ ಗೈಯುತ್ತಿದ್ದಾಗ, ಅವರ ರಕ್ಷಣೆಗಾಗಿ ವಿಷ್ಣುವು ಶ್ರೀಕೃಷ್ಣನವಾಗಿ ಅವತರಿಸಿ ಬಂದಿದ್ದಾನೆ. ಶ್ರೀ ಕೃಷ್ಣನು ದೇವಕಿಯ ಗರ್ಭದಲ್ಲಿದ್ದಾಗಿನಿಂದಲೂ ಈ ಲೋಕದಿಂದ ನಿರ್ಗಮಿಸುವವರೆಗೆ ಅನೇಕ ಲೀಲೆಗಳನ್ನು ಮಾಡುತ್ತಾ ಬಂದು, ಅಸುರರನ್ನು ತನ್ನ ಚತುರೋಪಾದಿಗಳಿಂದ ಅಸುರರು ತಾವು ಬೀಸಿದ ಬಲೆಯಲ್ಲಿಯೇ ಬಿಳಿಸಿ ವಿನಾಶಗೈದಿದ್ದಾನೆ. ಕೃಷ್ಣನು ದೊಡ್ಡ ಕಿಂಗ್ ಮೇಕರ್ ಆಗಿ, ಧರ್ಮವಂತರಿಗೆ ರಾಜಸಿಂಹಾಸನದ ಮೇಲೆ ಕೂರಿಸಿದ, ಹಾಗಾಗಿಯೇ ಕೌರವರು ದೊಡ್ಡ ಸೈನ್ಯ ಹೊಂದಿದ್ದರೂ ಅವರು ಅಧರ್ಮದ ಪಕ್ಷ ವಹಿಸಿದ್ದರಿಂದ ಅವರು ಸೋಲು ಕಾಣಬೇಕಾಯಿತು. ಆದರೆ ಪಾಂಡವರು ಸಣ್ಣ ಸೈನ್ಯ ಹೊಂದಿದ್ದರೂ ಅವರು ಧರ್ಮದ ಪಕ್ಷವಹಿಸಿದ್ದರಿಂದ ಕೃಷ್ಣನ ಕೃಪೆಗೆ ಪಾತ್ರರಾಗಿ ಗೆಲುವು ಕಾಣುವಂತಾಯಿತು. ಧರ್ಮದ ವಿಷಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಎಲ್ಲಾ ಮೋಹಗಳನ್ನು ತ್ಯಜಿಸಿ, ಅಚಲವಾಗಿರುವಂತೆ ನೋಡಿಕೊಂಡ. ಹಾಗಾಗಿ ನಾವಿಂದು ಎಲ್ಲಾ ಮೋಹಗಳನ್ನು ತ್ಯಜಿಸಿ, ಧರ್ಮದ ವಿಷಯದಲ್ಲಿ ಅರ್ಜುನನಂತೆ ಅಚಲರಾಗಿದ್ದರೆ ಈ ಕಾಲದಲ್ಲೂ ಧರ್ಮದ ವಿಜಯ ಖಂಡಿತ ಸಾಧ್ಯವಾಗುತ್ತದೆ ಎಂದು ಸಿಕಿಂದ್ರಾಬಾದ ಇಸ್ಕಾನ್ ಟೆಂಪಲ್‍ನ ಪ್ರಮುಖರಾದ ಸಾಧಕರಾದ ಶ್ರೀಕೃಷ್ಣ ಚೈತನ್ಯದಾಸ ಪ್ರಭುರವರು ಹೇಳಿದರು.
ಅವರು ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ ಶ್ರೀಕೃಷ್ಣ ಜನ್ಮೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಮುಂದುವರೆದು, ಕೃಷ್ಣನ ಜನ್ಮಾಷ್ಠಮಿ ಆಚರಿಸುವುದರಿಂದ ಮತ್ತು ಈ ಜನ್ಮಾಷ್ಠಮಿ ದಿವಸ ಸತ್ಕಾರ್ಯಗಳು ಮಾಡುವುದರಿಂದ, ಅನೇಕ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮನುಷ್ಯನು ಪುಣ್ಯದ ಫಲದಿಂದ ಮನುಷ್ಯನಾಗಿ ಜನ್ಮ ತಾಳುತ್ತಾನೆ. ಮನುಷ್ಯ ಜನ್ಮದಲ್ಲಿಯೇ ಆತನಿಗೆ ಜೀವ ಮತ್ತು ದೇವರ ಅರಿವು ಮಾಡಿಕೊಳ್ಳಲು ಸಾಧ್ಯವಿದೆ. ಹಾಗಾಗಿ ಮೋಕ್ಷದ ಪ್ರಾಪ್ತಿಗಾಗಿ ಮತ್ತು ಜೀವನದ ಮುಕ್ತಿಗಾಗಿ ಶ್ರೀಕೃಷ್ಣನು ಮನುಷ್ಯ ಜೀವನ ಹಾಳು ಮಾಡಿಕೊಳ್ಳಬಾರದೆಂದು ಭಗವದ್ಗೀತೆಯಲ್ಲಿ ಅನೇಕ ಆಚಾರ ವಿಚಾರಗಳ ಬಗ್ಗೆ ಹೇಳಿದ್ದಾನೆ. ಅವನ್ನು ಅನುಸರಿಸಿದರೆ ತನ್ನ ಉದ್ದಾರ ಮತ್ತು ಜಗದ ಉದ್ಧಾರ ಮಾಡಿಕೊಳ್ಳಲು ಸಾಧ್ಯವಿದೆ, ಇದಕ್ಕೆ ಇತಿಹಾಸ ಕೂಡ ಸಾಕ್ಷಿಯಾಗಿದೆ ಎಂದರು.
ಶ್ರೀಕೃಷ್ಣನು ಗೋವಿನ ಮತ್ತು ಭೂಮಿಯ ಮಹತ್ವ ತಿಳಿಸುವುದಕ್ಕಾಗಿ ಗೋವಿಂದನಾಗಿ, ಗೋಪಾಲಕನಾಗಿ ಬಂದದ್ದಾನೆ. ಗೋವಿನ ಸಂತತಿ ಹೆಚ್ಚಾದರೆ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ಮತ್ತು ಸಾತ್ವಿಕತೆ ಬೆಳೆಯುತ್ತದೆ, ಭೂಮಿ ಕೂಡ ರಾಸಾಯನಿಕದಿಂದ ಮುಕ್ತತೆ ಪಡೆದು ಫಲವತ್ತತೆಯಾಗುತ್ತದೆ. ವಿಜ್ಞಾನ ಕೂಡ ಇದು ಒಪ್ಪಿದೆ. ಹಾಗಾಗಿ ಸರಕಾರ ರಾಷ್ಟ್ರಾದ್ಯಂತ ಗೋಪಾಲನೆ ಉತ್ತೇಜಿಸುವುದಕ್ಕಾಗಿ ಭಾರಿ ಪ್ರಮಾಣದಲ್ಲಿ ಸಬ್ಸಿಡಿ ನೀಡಲು ಮುಂದಾಗಬೇಕೆಂದರು.
ಸ್ತ್ರಿಯರ ಮೇಲೆ ದೌರ್ಜನ್ಯ ಹೆಚ್ಚಾಗಿರುವುದನ್ನು ನಿಬರ್ಂಧಿಸಲು ಕೃಷ್ಣನ ಮಾರ್ಗ ಅನುಸರಿಸುವುದು ಯೋಗ್ಯವಾಗಿದೆ. ದ್ರೌಪದಿಗೆ ಮಾನಪಹರಣದ ವೇಳೆ ಕೃಷ್ಣನು ಆಕೆಯ ಮಾನ ಕಾಪಾಡಿರುವುದು ಪುರುಷ ಸಂಕುಲಕ್ಕೆ ಹೆಮ್ಮೆಯ ವಿಷಯವಾಗಿದೆ.
ಹಾಗಾಗಿ ಸ್ತ್ರಿ ದೌರ್ಜನ್ಯ ತಡೆಯಲು ನಾವು ಕೃಷ್ಣನ ಮಾರ್ಗವನ್ನು ಅನುಸರಿಸಬೇಕಾಗಿ ಎಂದರು.
ಧರ್ಮದ ಮಾರ್ಗದಲ್ಲಿರುವವರಿಗೆ ಈ ಕಾಲದಲ್ಲಿ ಹೆಚ್ಚಾಗಿ ಭಯ ಕಾಡುತ್ತಿದೆ. ಅಧರ್ಮದ ಮಾರ್ಗದಲ್ಲಿರುವವರಿಗೆ ನಿರ್ಭಯವಿದೆ. ಆದರೆ ಇದು ತಾತ್ಕಾಲಿಕವಾಗಿದೆ, ಏಕೆಂದರೆ, ಕೃಷ್ಣನು ಧರ್ಮದಪರ ಇರುವುದರಿಂದ ಧರ್ಮದ ಮಾರ್ಗದಲ್ಲಿರುವವರು ಅಂಜದೇ ಮುನ್ನುಗ್ಗಬೇಕೆಂದು ಹೇಳಿದರು.
ನಾವು ಎಷ್ಟೇ ಬಲಶಾಲಿಯಾಗಿದ್ದರೂ ಪ್ರಕೃತಿ ನಿಯಮದಂತೆ ವೃದ್ಧಾಪ್ಯದಲ್ಲಿ ನಾವು ಎಲ್ಲಾ ಬಲ ಸೌಂದರ್ಯ ಕಳೆದುಕೊಂಡು ಕುರೂಪಿಗಳಾಗಿ ನಿರ್ಬಲರಾಗುತ್ತೇವೆ. ಹಾಗಾಗಿ ನಾವು ಕ್ಷಣಿಕವಾದ ಭೌತಿಕ ಸಂಪತ್ತಿಗೆ ಮಹತ್ವ ಕೊಡದೇ, ಶ್ರೇಷ್ಠವಾದ ಆತ್ಮ ಸಂಪತ್ತಿಗೆ ಮಹತ್ವ ಕೊಡಬೇಕೆಂದರು.
ಈಗಿನ ರಾಷ್ಟ್ರದ ಮತ್ತು ವಿಶ್ವದ ರಾಜಕೀಯ ವ್ಯವಸ್ಥೆಯಲ್ಲಿ ಅರಾಜಕತೆ ತಾಂಡವವಾಡುತ್ತಿದೆ, ಕೃಷ್ಣನು ಒಳ್ಳೆಯ ರಾಜನೀತಿಜ್ಞನಾಗಿದ್ದ. ಆತ ಬೋಧಿಸಿದ ತೋರ್ಪಡಿಸಿದ ವಿಧಿ ವಿಧಾನಗಳಂತೆ ರಾಜ್ಯಭಾರ ಮಾಡಿದರೆ, ದೇಶ ವಿಶ್ವ ಸುಭಿಕ್ಷ ಮತ್ತು ಸುರಕ್ಷಿತವಾಗಿರುತ್ತದೆ ಮತ್ತು ಧರ್ಮದ ಹಾದಿಯಲ್ಲಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀದರ ಇಸ್ಕಾನ್‍ನ ಪ್ರಮುಖರಾದ ಡಾ. ನಿಲೇಶ ದೇಶಮುಖರವರು ಮಾತನಾಡುತ್ತಾ, ಶ್ರೀಕೃಷ್ಣನ ಜನ್ಮಾಷ್ಠಮಿ ಆಚರಣೆಯಿಂದ ನಾವು ಶ್ರೀ ಕೃಷ್ಣನ ಮಾರ್ಗದಲ್ಲಿ ಮತ್ತು ಆತ ಬೋಧಿಸಿದ ಭಗವದ್ಗೀತೆಯ ಮಾರ್ಗದಲ್ಲಿ ನಡೆಯಲು ಪ್ರೇರಣೆ ಸಿಗುತ್ತದೆ. ಭಾರತೀಯ ಸಂಸ್ಕøತಿಯಲ್ಲಿ ಭಗವದ್ಗೀತೆಗೆ ಮಹಾನ್ ಸ್ಥಾನವಿದೆ, ಅದರ ಪ್ರಚಾರ, ಪ್ರಸಾರ, ಅನುಸರಣೆಯಾದರೆ ಕೆಟ್ಟದರ ಮತ್ತು ಕೇಡಿಗಳ ನಿರ್ಮೂಲನೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಿವರಾಮ ಜೋಶಿ, ರಾಮಕೃಷ್ಣನ್ ಸಾಳೆ, ಕೆ. ಜಗನ್ನಾಥ, ಈಶ್ವರಸಿಂಗ್ ಠಾಕೂರ, ವಾಯ್. ಮಾಣಿಕರಾವ, ದಶರಥ ಕತ್ರಿ, ಸಾಯಿಲು ಕಮ್ಮಾರೆಡ್ಡಿ, ಜಾಲಿಂದ್ರ ಕಾಂಬಳಿವಾಡಿ, ಪಾಂಡುರಂಗ ವಿಠಲಪೂರ, ಸಿದ್ರಾಮ ಸಿಂಧೆ, ಚನ್ನಬಸವ ಹೇಡೆ, ನಾಗರೆಡ್ಡಿ ರಾಜೇಶ್ವರ, ವಿಜಯಕುಮಾರ ಬಸಿರಾಪೂರ, ಅನೀಲ ಬಸಿರಾಪೂರ ಮತ್ತೀತರರು ಉಪಸ್ಥಿತರಿದ್ದರು.