ಶ್ರದ್ಧೆ, ಭಕ್ತಿಯಿಂದ ಮಾಡಿದ ಕಾರ್ಯ ಕೊನೆಯವರೆಗೂ ಉಳಿಯುತ್ತದೆ
ಭಾಲ್ಕಿ:ಆ.26: ಸೇವೆಯಲ್ಲಿರುವವರೆಗೆ ಶ್ರದ್ಧೆ ಮತ್ತು ಭಕ್ತಿಯಿಮದ ಮಾಡಿದ ಕಾರ್ಯ ಜೀವನದ ಕೊನೆಯವರೆಗೂ ಉಳಿಯುತ್ತದೆ ಎಂದು ನಿವೃತ್ತ ಶಿಕ್ಷಣ ಸಂಯೋಜಕ ಬಾಬುರಾವ ಬಿರಾದಾರ ಅಭಿಪ್ರಾಯಪಟ್ಟರು.
ಪಟ್ಟಣದ ಬಾಲಾಜಿ ಮಂದಿರದಲ್ಲಿ ಶನಿವಾರ ಬಾಬುರಾವ ಬಿರಾದಾರ ಸೇವಾ ನಿವೃತ್ತಿಯ ನಿಮಿತ್ಯ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾವು ಮಾಡುವ ಕಾರ್ಯಗಳು ಎಲ್ಲರೂ ಮೆಚ್ಚುವಂತಿರಬೇಕು. ಸೇವೆಯಲ್ಲಿರುವವರೆಗೆ ಶ್ರದ್ಧೆ ಮತ್ತು ಭಕ್ತಿಯಿಂದ ಕಾರ್ಯನಿರ್ವಹಿಸಬೇಕು. ಎಂತಹ ಕಠಿಣ ಪರಿಸ್ಥಿಯಲ್ಲಿಯೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವಹಾಗೆ ನಡೆದುಕೊಳ್ಳಬಾರದು. ಶಿಕ್ಷಕರ ವೃತ್ತಿ ಪವಿತ್ರವಾದ ವೃತ್ತಿ ಯಾಗಿದೆ. ನನ್ನ 40 ವರ್ಷ ವೃತ್ತಿ ಜೀವನದಲ್ಲಿ ಯಾವುದೇ ತಪ್ಪಿಗೆ ಒಳಗಾಗದೆ ಎಲ್ಲರನ್ನು ಮೆಚ್ಚುವಂತೆ ಕೆಲಸ ಮಾಡಿರುವುದು ನನಗೆ ಖುಷಿ ತಂದು ಕೊಟ್ಟಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಓ ಸಹದೇವ.ಜಿ ಮಾತನಾಡಿ, ಬಾಬುರಾವ ಬಿರಾದಾರ ರವರು ನಡೆದಾಡುವ ಕೆಸಿಎಸ್‍ಆರ್ ಆಗಿದ್ದರು. ನಮಗೆ ಯಾವುದೇ ಸಮಸ್ಯೆಗಳು ಎದುರಾದರೂ ತಕ್ಷಣವೇ ಪರಿಹಾರ ಒದಗಿಸುತ್ತಿದ್ದರು. ನಿವೃತ್ತಿ ನಂತರವೂ ಅವರ ಸೇವೆ ನಮಗೆ ಸದಾ ದೊರೆಯಲಿ ಎಂದು ಹಾರೈಸಿದರು.
ಶಿಕ್ಷಕ ಬಾಲಾಜಿ ಬೈರಾಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ನಿರಂಜಪ್ಪ ಪಾತ್ರೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಅಧ್ಯಕ್ಷೆ ಕೀರ್ತಿಲತಾ ಹೊಸಾಳೆ, ಮುಖ್ಯ ಶಿಕ್ಷಕ ಅಶೋಕ ಬಿರಾದಾರ ರವರು ಬಾಬುರಾವ ಬಿರಾದಾರ ನಡೆದುಬಂದ ದಾರಿಯ ಬಗ್ಗೆ ಮೆಲುಕು ಹಾಕಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಬಸವರಾಜ ಬಡದಾಳೆ, ಚಂದ್ರಕಾಂತ ತಳವಾಡೆ, ಭೀಮಣ್ಣ ಕೊಂಕಣೆ, ಅರುಣಾ, ವಿಜಯಲಕ್ಷ್ಮಿ ಮಾನಕಾರ, ರತ್ನಮ್ಮ ಹಾಲಕುಡೆ, ಪೂರ್ಣಿಮಾ ಪಾಟೀಲ ಉಪಸ್ಥಿತರಿದ್ದರು.
ಅಶೋಕ ಮಲ್ಲೇಶಿ ಸ್ವಾಗತಿಸಿದರು. ಸಂತೋಷಕುಮಾರ ವಾಡೆ ನಿರೂಪಿಸಿದರು. ರಾಜಕುಮಾರ ಪಾಲೆಪೂರೆ ವಂದಿಸಿದರು.