ಶರಣ ಪರಂಪರೆ ಶೀಲದ ಪರಂಪರೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.26:- ಮನದ ಮೈಲಿಗೆ ತೊಳೆಯಲು ಶರಣರ ಚಿಂತನೆ ಬೇಕು. ಶರಣ ಪರಂಪರೆ ಶೀಲದ ಪರಂಪರೆ ಎಂದು ಗಾಂಧಿನಗರ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಉರಿಲಿಂಗಪೆದ್ದಿ ಮಹಾಸಂಸ್ಥಾನ ಶಾಖಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರಾವಣದಲ್ಲಿ ಶರಣರ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.
ಶರಣ ಪ್ರಕಾರ ಶೀಲ ಎಂದರೆ ಪರಧನ, ಪರಸ್ತ್ರೀ, ಪರದೈವಕ್ಕೆ ಆಸೆಪಡದಿರುವುದು. ಶರಣ ಪರಂಪರೆ ಮನುಷ್ಯ ಸ್ವಚ್ಛವಾಗಿ ಬದುಕಲು ಬೇಕಾದ್ದನ್ನು ತಿಳಿಸಿದೆ ಎಂದರು.
ಬುದ್ಧನ ಪಂಚಶೀಲ, ಬಸವನ ಸಪ್ತಶೀಲ ಪಾಲನೆ ಮಾಡಬಾರದೇ? ಮದ್ಯಪಾನ ಮಾಡಬಾರದು, ಸುಳ್ಳು ಹೇಳಬಾರದು, ವ್ಯಭಿಚಾರ ಮಾಡಬಾರದು ಎಂಬುದನ್ನು ಹೇಳಬಾರದೇ? ಮನೆಯ ಯಾಜಮಾನನಾದವನು ಮದ್ಯವ್ಯಸನಿಯಾಗಿದ್ದರೆ ಆ ಕುಟುಂಬ ನೆಮ್ಮದಿಯಾಗಿರಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಶರಣ ಪರಂಪರೆ ಬೇಡುವ ಪರಂಪರೆಯಲ್ಲ. ಬೇಡವವರು ಶರಣನಲ್ಲ. ಬೇಡುವರಿಲ್ಲದೇ ಬಡವನಾದೇ ಎನ್ನುತ್ತಾರೆ ಶರಣರು. 12ನೇ ಶತಮಾನದಲ್ಲಿ ಸತ್ಯಶುದ್ಧ ಕಾಯಕ ಸಮಾಜವನ್ನು ಶರಣರು ಪ್ರತಿಪಾದಿಸಿದರು. ಕಾಯಕ ಮಾಡಿದವನಿಗೆ ಕಾಯಿಲೆ ಇಲ್ಲ. ಇವತ್ತು ಜನರು ಕಾಯಕ ಮಾಡದೇ ಅನೇಕ ಕಾಯಿಲೆಗಳಿಗೆ ತುತ್ತಾಗಿದ್ದಾರೆ ಎಂದು ಹೇಳಿದರು.
ದೇಹವೇ ದೇಗುಲ ಎಂದ ಬಸವಣ್ಣ ಅಂಗೈ ಮೇಲಿನ ಲಿಂಗವನ್ನು ಬಿಟ್ಟು ಬೇರೆ ಗುಡಿ ಮತ್ತು ಯಾವುದೇ ತೀರ್ಥ ಕ್ಷೇತ್ರಗಳಿಗೆ ಹೋಗಿ ನಮಸ್ಕಾರ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಅನ್ಯದೇವಕ್ಕೆ ಅನ್ಯತೀರ್ಥಕ್ಕೆ ಕೈ ಮುಗಿಯುವುದು ಸ್ವಾಭಿಮಾನವಲ್ಲ ಗುಲಾಮಗಿರಿ ಎನ್ನುತ್ತಾರೆ ಶರಣರು. ನಿಂತಲ್ಲೆ ಕೂಡಲ ಸಂಗನ ಶರಣರ ಕಂಡರೆ ದೇವನೆಂದಿರುವ ಮಾತುಗಳನ್ನು ಸ್ಮರಣೆಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಬಸವಾದಿ ಶರಣರು ಜ್ಞಾನದ ಶಿಖರ. ಉರಿಲಿಂಗಿಪೆದ್ದಿಯ ನಂತರ 23 ತಲೆಮಾರು ಬರುತ್ತದೆ. ಉರಿಲಿಂಗಿಪೆದ್ದಿ ಶರಣರು ಆಗಮ್ಯ ಪಂಡಿತರಾಗಿದ್ದರು. ಸಂಸ್ಕೃತ ಬಲ್ಲವರಾಗಿದ್ದರು. ವೇದ, ಸ್ಮೃತಿ, ಪುರಾಣ ಅಧ್ಯಯನ ಮಾಡಿದ್ದರು. ನಡೆಯೊಂದು ಕಡೆ ನುಡಿಯೊಂದು ಕಡೆಗಲ್ಲದೇ ಪವಿತ್ರವಾದ ಪರಂಪರೆ ಉರಿಲಿಂಗಿಪೆದ್ದಿ ಪರಂಪರೆ ಎಂದು ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕ ಪೆÇ್ರ. ಸದಾಶಿವಮೂರ್ತಿ ಶರಣ ಚಿಂತನೆ ಕುರಿತು ಮಾತನಾಡಿ, ಶರಣ, ಸಂತರು ಸಾರ್ವಕಾಲಿಕ. ಎಲ್ಲಿಯವರೆಗೂ ಎಲ್ಲ ಮಾದರಿಯ ತರತಮಗಳು ಇರುತ್ತವೆಯೋ ಅಲ್ಲಿಯವರೆಗೆ ಶರಣರೊಂದಿಗೆ ಚಿಂತನಮಂಥನ ಅಗತ್ಯ. ಮನಸ್ಸಿನ ಮಲೀನತೆ ಶುಚಿಗೆ ಶರಣರ ಚಿಂತನೆಯೇ ಏಕೈಕ ಸಾಧನ ಎಂದರು.
ಬಾಬಾ ಸಾಹೇಬ ಬಿ.ಆರ್. ಅಂಬೇಡ್ಕರ್ ಅವರು ಇತಿಹಾಸ ಪ್ರಜ್ಞೆ ಅವಶ್ಯ ಎನ್ನುತ್ತಾರೆ. ಇವತ್ತು ಪರಂಪರೆಯ ಪ್ರಜ್ಞೆ ಇಲ್ಲ. ಆದರಿಂದಲೇ ತಂದೆ ತಾಯಿಯನ್ನು ಮರೆತು ವಿಲಾಸ ಜೀವನ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ಅಪಾಯಕಾರಿ ಎಂದು ನುಡಿದರು.
ಕರ್ಮಯೋಗಿ ಸಿದ್ಧರಾಮೇಶ್ವರ ಜೀವನ ವೃತಾಂತವನ್ನು ವಿವರಿಸಿದ ಅವರು, ಸಿದ್ಧರಾಮೇಶ್ವರ ಬಸವಾದಿ ಪ್ರಮುಖರಲ್ಲಿ ಮೇಲ್ಪಂಕ್ತಿಯ ವಚನಕಾರ. ಕುಡಿ ಒಕ್ಕಲಿಗ ಸಮುದಾಯದ ಅವರು 900 ವರ್ಷಗಳ ಹಿಂದೆಯೇ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಇವರ ಸೇವಾ ಕಾರ್ಯಗಳು ಯಾವ ಜಾತಿಗೂ ಸೀಮಿತವಾಗಿರಲಿಲ್ಲ ಎಂದರು.
ಸಿದ್ಧಾರಾಮೇಶ್ವರರು ತಮ್ಮ ವಚನವೊಂದರಲ್ಲಿ 68 ಸಾವಿರ ವಚನಗಳ ಹಾಡಿ ಹಾಡಿ ಸೋತಿತು ಮನ ಎಂದಿದ್ದಾರೆ. ಆದರೆ 1800 ವಚನಗಳು ಮಾತ್ರ ಲಭ್ಯವಾಗಿವೆ ಎಂದು ಹೇಳಿದರು.
ಲಕ್ಷ್ಮಮ್ಮ, ಸರೋಜಮ್ಮ ರಾಮಸಿಂಗಪ್ಪ, ಲಕ್ಷ್ಮಮ್ಮ ಮರಲಿಂಗಪ್ಪ, ಸುಶೀಲಮ್ಮ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಗಾಯಕಿ ಚೂಡಾಮಣಿ ಅವರು ವಚನ ಹಾಡಿದರು.
ಮುಡೂಕುತೊರೆ ಶಾಖಾ ಮಠದ ಸಿದ್ದರಾಮಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಇದ್ದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ದಿವಾಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಠದ ಹಿರಿಯ ವಿದ್ಯಾರ್ಥಿ ಸುಬ್ರಹ್ಮಣ್ಯ ನಿರೂಪಿಸಿದರು.