ನಿರುದ್ಯೋಗ ದ ವಿರುದ್ದ ನಿರಂತರ ಹೋರಾಟ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಆ 25 : ಕೇಂದ್ರ ಸರ್ಕಾರ ನಿರುದ್ಯೋಗ ತೊಡೆದು ಹಾಕುವಲ್ಲಿ ವಿಫಲವಾಗಿದೆ. ಅಪ್ರೆಂಟ್‌ಷಿಪ್‌ ಹೆಸರಲ್ಲಿ ₹5 ಸಾವಿರ ನೀಡುವ ಮಾತನ್ನು ಸರ್ಕಾರ ಈಗ ಆಡುತ್ತಿದೆ. ಇದರಿಂದ ಮನೆ ನಡೆಯಲು ಸಾಧ್ಯವಿಲ್ಲ. ಕಾಯಂ ಉದ್ಯೋಗವನ್ನೇ ನೀಡಬೇಕು ಎಂಬ ನಿಟ್ಟಿನಲ್ಲಿ ಡಿವೈಎಫ್‌ಐ ಹೋರಾಟ ನಿರಂತರ ಸಾಗಲಿದೆ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.
ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ ಹಾಗೂ ವಿಜಯುನಗರ–ಬಳ್ಳಾರಿ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶನಿವಾರ ಇಲ್ಲಿ ಆರಂಭವಾದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ (ಡಿವೈಎಫ್‌ಐ) ರಾಜ್ಯ ಸಂಘಟನಾ ಕಾರ್ಯಾಗಾರದಲ್ಲಿ ಮಾತನಾಡಿದ ಸಂಘಟನೆಯ ಅಖಿಲ ಭಾರತ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಎ.ಎ.ರಹೀಂ ಈ ವಿಷಯ ತಿಳಿಸಿದರು.
ಸಂಘಟನೆಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಬೆಂಗಳೂರಿನಲ್ಲಿ ಮಾತ್ರವಲ್ಲ, ಜಿಲ್ಲಾ ಮಟ್ಟದಲ್ಲೂ ಉದ್ಯೋಗ ಅವಕಾಶ ಹೆಚ್ಚಿಸಬೇಕು, ಇಲ್ಲೂ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು. ಕೆಲವೇ  ಕೆಲವು ಕಾರ್ಪೊರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ನೇಮಕಾತಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದರು.
ಡಿವೈಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷೆ ಲವಿತ್ರ ವಸ್ತ್ರದ್‌ ಅಧ್ಯಕ್ಷತೆ ವಹಿಸಿದ್ದರು. ಸಿದ್ಧತಾ ಸಮಿತಿಯ ಅಧ್ಯಕ್ಷ ಎ.ಕರುಣಾನಿಧಿ ಸಂಘಟನೆಯ ಬಗ್ಗೆ ಮಾತನಾಡಿ, ಯುವಪಡೆ ಉತ್ಸಾಹ ಕಳೆದುಕೊಂಡಂತೆ ಕಾಣಿಸುತ್ತಿದ್ದು, ಮತ್ತೆ ಪ್ರಬಲವಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷ ಜಂಬಯ್ಯ ನಾಯಕ, ವಿಮಾ ನೌಕರರ ಸಂಘದ ಅಧ್ಯಕ್ಷ ಜೆ.ಪ್ರಕಾಶ, ಜಿಲ್ಲಾ ಕಾರ್ಯದರ್ಶಿ ಈಡಿಗರ ಮಂಜುನಾಥ, ಅಧ್ಯಕ್ಷ ವಿ.ಸ್ವಾಮಿ ಇತರರು ಪಾಲ್ಗೊಂಡಿದ್ದರು.
ಜಿಂದಾಲ್ ವಿರುದ್ದವೂ ಹೋರಾಟ.
ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವುದರ ವಿರುದ್ಧ ಈ ಹಿಂದೆ ಸಂಘಟಿತವಾಗಿ ಹೋರಾಟ ನಡೆಸಲಾಗಿತ್ತು. ಇದೀಗ ಮತ್ತೆ ಅಂತಹದೇ ಹೋರಾಟದ ಅಗತ್ಯ ಎದುರಾಗಿದೆ. ಈ ಹಿಂದೆ ಭೂಮಿ ಮಾರಾಟಕ್ಕೆ ವಿರೋಧಿಸಿದ್ದ ಕಾಂಗ್ರೆಸ್‌ ಇದೀಗ ಉಲ್ಟಾ ಹೊಡೆದಿದೆ. ಮೂರೂ ಪಕ್ಷಗಳು ಒಂದೇ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.