ಎಂ ಎಸ್ ಪಿ ಎಲ್ ನಿಂದ ಕೃತಕ ಕಾಲು ಜೋಡಣೆಹೊಸ ಬದುಕಿಗೆ ಮುನ್ನಡೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ಎಂಎಸ್‌ಪಿಎಲ್ ಸಂಸ್ಥೆಯಿಂದ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಇಲ್ಲಿನ ಸಹಕಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆರಂಭವಾಗಿದ್ದು, ಮೊದಲ ದಿನ 92 ಜನರು ವಿವಿಧ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ಸಾಗಿಸುವ ಕನಸಿಗೆ ನೀರೆರೆದರು.
71 ಮಂದಿಗೆ ಕೃತಕ ಕಾಲು, 16 ಮಂದಿಗೆ ಕ್ಯಾಲಿಪರ್, ಇಬ್ಬರಿಗೆ ಕೃತಕ ಕೈ ಹಾಗೂ ಮೂವರು ಊರುಗೋಲು ಪಡೆದರು.
ಎಂಎಸ್‌ಪಿಎಲ್‌ ಸಂಸ್ಥೆಯು ಭಗವಾನ್ ಮಹಾವೀರ ವಿಕಲಾಂಗ ಸಹಾಯತಾ ಸಮಿತಿ ಜೈಪುರ ಸಹಯೋಗದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರವನ್ನು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಉದ್ಘಾಟಿಸಿದರು.
‘ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಕಡ್ಡಾಯವಾಗಿ ಬಳಸಬೇಕೆಂಬ ನಿಯಮ ರೂಪುಗೊಳ್ಳುವುದಕ್ಕೆ ಮೊದಲೇ ಎಂಎಸ್‌ಪಿಎಲ್‌ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ವಿಜಯನಗರ ಜಿಲ್ಲೆಯ ಆಯ್ದ ಹಳ್ಳಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ಮೂಲಕ ಜೈಪುರ ಕೃತಕ ಕಾಲು ಜೋಡಣೆ ಗಳಂತಹ ಶಿಬಿರಗಳನ್ನು ಆಯೋಜಿಸಿ, ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡಿದೆ’ ಎಂದು ಅವರು ಹೇಳಿದರು.
ಚಿತ್ರದೇವಿ ಎನ್. ಬಲ್ಡೋಟ ಮಾತನಾಡಿ, ಎಂಎಸ್‌ಪಿಎಲ್‌ ಸಂಸ್ಥೆಯು, ಸಿಎಸ್ಆರ್ ಕಾರ್ಯಕ್ರಮದ ಭಾಗವಾಗಿ, ಆರೋಗ್ಯ, ಶಿಕ್ಷಣದ ಅಭಿವೃದ್ಧಿ, ಯುವಕರಿಗೆ ಕೌಶಲ್ಯ ತರಬೇತಿ, ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣ, ಪರಿಸರ ಸುಸ್ಥಿರತೆ, ಕಲೆ ಮತ್ತು ಸಂಸ್ಕೃತಿ, ಗ್ರಾಮೀಣ ಕ್ರೀಡೆಗಳ ಉತ್ತೇಜನ ಮುಂತಾದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯ್ದ 20 ಹಳ್ಳಿಗಳಲ್ಲಿ ಕೈಗೊಳ್ಳುತ್ತಿದೆ. ಕಳೆದ 10 ವರ್ಷಗಳಲ್ಲಿ ಆಯೋಜಿಸಿದ್ದ ಜೈಪುರ್ ಕೃತಕ ಕಾಲು ಜೋಡಣೆ ಶಿಬಿರದಲ್ಲಿ 2,500 ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ ಎಂದರು.
ಫಲಾನುಭವಿಗಳಾದ ಸುಮಲತಾ, ಶಾಂತನಗೌಡ್ರು, ಶ್ರೀಪ್ರಿಯ ತಮ್ಮ ಅನುಭವ ಹಂಚಿಕೊಂಡರು. ಭಗವಾನ್ ಮಹಾವೀರ ವಿಕಲಾಂಗ ಸಹಾಯತಾ ಸಮಿತಿಯ ಅನಿಲ್ ಸುರಾನ, ಬಲ್ಡೋಟ ಸಮೂಹದ ಅಧ್ಯಕ್ಷ  ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ ನರೇಂದ್ರಕುಮಾರ್ ಎ. ಬಲ್ಡೋಟ ಇದ್ವರು. ಸೋಮವಾರದವರೆಗೆ ಈ ಶಿಬಿರ ನಡೆಯಲಿದೆ.