ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪೂರ್ಣಿಮಾ ಜಾರ್ಜ ಆಯ್ಕೆ
ಬೀದರ, ಆ.25 : ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಪೂರ್ಣಿಮಾ ಜಾರ್ಜ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.
ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ, ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಶಾಲೆಗಳನ್ನು ನಡೆಸುತ್ತಿದ್ದು, ಸ್ವತಃ ಸಾಹಿತಿಯೂ ಆಗಿರುವ ಡಾ.ಪೂರ್ಣಿಮಾ ಜಾರ್ಜ ಅವರನ್ನು ಆಯ್ಕೆ ಮಾಡಲಾಯಿತೆಂದು ತಿಳಿಸಿದ್ದಾರೆ.
ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರದ ಡಾ.ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಮತ್ತು ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರು ಸ್ವತಃ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಾಗಿದ್ದು, ಆಸಕ್ತರು ತಮ್ಮ ಹೆಸರುಗಳನ್ನು ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಅವರ ಬಳಿ ನೋಂದಾಯಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಾ.ಪೂರ್ಣಿಮಾ ಜಾರ್ಜ್ ಅವರ ಪರಿಚಯ :
ಬೀದರ ನಗರ ವಾಸಿಯಾಗಿರುವ ಡಾ.ಪೂರ್ಣಿಮಾ ಜಾರ್ಜ್ ಅವರು ಎಂ.ಎ., ಎಂ.ಫಿಲ್, ಪಿ.ಎಚ್.ಡಿ. ಪೂರೈಸಿದ್ದು, ಪ್ರಸ್ತುತ ಬೀದರನ ಪ್ರಖ್ಯಾತ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಸಾವಿರಾರು ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆ, ಈ ಹಿಂದೆ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ, ಮುಂಬಯಿಯ ರಾಷ್ಟ್ರೀಯ ಮಟ್ಟದ ಮಾಜಿ ಉಪಾಧ್ಯಕ್ಷರಾಗಿ, ಎಫ್.ಪಿ.ಎ.ಐ ಬೀದರಿನ ಉಪಾಧ್ಯಕ್ಷರಾಗಿ, ರಾಷ್ಟ್ರೀಯ ಮಹಿಳಾ ವಿಜ್ಞಾನಿಗಳ ಸಮಾವೇಶದ ಅಧ್ಯಕ್ಷರಾಗಿ, 72ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಸಮ್ಮೇಳನಾಧ್ಯಕ್ಷರೊಡನೆ ಸಂವಾದ’ ದಲ್ಲಿ ಭಾಗಿಯಾಗಿದ್ದರು. 2011 ರಲ್ಲಿ ನಡೆದ ಬೀದರ್ ಉತ್ಸವದ ಸ್ಮರಣಸಂಚಿಕೆಯ ಸಲಹಾ ಮಂಡಳಿಯ ಸದಸ್ಯೆಯಾಗಿ ಕೆಲಸ ನಿರ್ವಹಿಸಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರಿನ ವತಿಯಿಂದ 2013 ರಲ್ಲಿ “ಅತ್ಯುತ್ತಮ ಸಮಾಜ ಸೇವಕಿ” ಪ್ರಶಸ್ತಿ ಸೇರಿದಂತೆ, ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕೃತಿಗಳು : ಈಗಾಗಲೇ ಅವರ “ಕತ್ತಲ ಇಬ್ಬನಿ ಬಣ್ಣದ ಚಿತ್ತಾರ” ಕವನ ಸಂಕಲನ ಹಾಗೂ “ಗಿಡದ ಬುಡದ ಹೆಣ್ಣು ಮತ್ತು ಇತರ ಕಥೆಗಳು” ಪ್ರಕಟಗೊಂಡಿವೆ. ಅವರ ಎಷ್ಟೋ ಕವನಗಳು, ಬರಹಗಳು ವಿವಿಧ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಪ್ರಕಟಗೊಂಡಿವೆ.
ಡಾ.ರಘುಶಂಖ ಭಾತಂಬ್ರಾ ಅವರು ಪೂರ್ಣಿಮಾ ಜಾರ್ಜ ಅವರ ಕುರಿತು ‘ಶಿಕ್ಷಣ ಸಿರಿ: ಡಾ.ಪೂರ್ಣಿಮಾ ಜಿ.’ ಎನ್ನುವ ಕೃತಿ ರಚಿಸಿದ್ದು, ಅದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.