ಜಾನುವಾರು ಕಳವು ಆರೋಪಿ ಸೆರೆ
ಶಿವಮೊಗ್ಗ, ಆ. ೨೪: ಫಾರಂ ಹೌಸ್ ವೊಂದರಲ್ಲಿ ನಾಲ್ಕು ಜಾನುವಾರುಗಳನ್ನು ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಆ. ೨೩ ರಂದು ನಡೆದಿದೆ.
ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕು ಅರಿಕಟ್ಟೆ ಗ್ರಾಮದ ನಿವಾಸಿ ಶಿವರಾಜ ಯಾನೆ ಕುಮಾರ್ (೨೬) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಕಳವು ಮಾಡಿದ್ದ ೨. ೪೦ ಲಕ್ಷ ರೂ. ಮೌಲ್ಯದ ನಾಲ್ಕು ಆಕಳುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
೯-೮-೨೦೨೪ ರಂದು ಆರೋಪಿಯು ಶಿರಾಳಕೊಪ್ಪ ಸಮೀಪದ ಚಿಕ್ಕಜಂಬೂರು ಗ್ರಾಮದ ನಿವಾಸಿ ಮಹಮ್ಮದ್ ಆಲಿಖಾನ್ ಎಂಬುವರಿಗೆ ಸೇರಿದ ಫಾರಂ ಹೌಸ್ ನಲ್ಲಿದ್ದ ಹಸುಗಳನ್ನು ಕಳವು ಮಾಡಿದ್ದ. ಈ ಕುರಿತಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಶಿಕಾರಿಪುರ ಡಿವೈಎಸ್ಪಿ ಕೇಶವ್, ಸರ್ಕಲ್ ಇನ್ಸ್’ಪೆಕ್ಟರ್ ರುದ್ರೇಶ್ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಪ್ರಶಾಂತ್ ಕುಮಾರ್ ಟಿ ಬಿ ನೇತೃತ್ವದಲ್ಲಿ ಪಿಎಸ್‌ಐ ಪುಷ್ಪಾ, ಸಿಬ್ಬಂದಿಗಳಾದ ಹೆಚ್.ಸಿ. ಸಂತೋಷ್, ಟೀಕಪ್ಪ, ಪಿಸಿಗಳಾದ ಸಲ್ಮಾನ್, ಕಾರ್ತಿಕ್, ಅಶೋಕ ಮತ್ತು ಪ್ರೇಮಾಬಾಯಿ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಸದರಿ ಪೊಲೀಸ್ ತಂಡಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.