ಆಕಸ್ಮಿಕವಾಗಿ ಬೆಂಕಿ ತಗುಲಿ ಫ್ಯಾನ್ಸಿ ಸ್ಟೋರ್ ಭಸ್ಮ
ಕುಂದಾಪುರ- ಬೈಂದೂರು ತಾಲೂಕಿನ ನಾವುಂದ ಜಂಕ್ಷನ್ ಪ್ಲಾಜಾ ಗ್ರೋ ಕಾಂಪ್ಲೆಕ್ಸ್ ನಲ್ಲಿರುವ ಪ್ರತೀಮಾ ಆಚಾರ್ಯ ಅವರಿಗೆ ಸಂಬಂಧಿಸಿದ ಫ್ಯಾನ್ಸಿ ಸ್ಟೋರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ.
ಪ್ರತಿಭಾ ವಿಜೇಂದ್ರ ಅರೆಹೊಳೆ ಎಂಬವರು ಟೈಲರಿಂಗ್ ಜೊತೆಯಲ್ಲಿ ಬಟ್ಟೆ ಹಾಗೂ ಸ್ಟೇಶನರಿಯೊಂದಿಗೆ ಅಂಗಡಿ ನಡೆಸಿಕೊಂಡಿದ್ದರು. ಅಂಗಡಿಯಲ್ಲಿ ಹೊಲಿಗೆ ಯಂತ್ರ, ಫ್ರಿಡ್ಜ್, ಬಟ್ಟೆ, ಪುಸ್ತಕಗಳು, ಸ್ಟೇಶನರಿ ವಸ್ತುಗಳು, ಕಪಾಟು, ಫ್ಯಾನ್ಸಿ ಐಟಂಗಳು, ಸುಮಾರು ೫೦೦೦ ಹಣ ಇದ್ದಿತ್ತು. ಅಂಗಡಿ ಮಾಲಕಿ ಪ್ರತಿಭಾ ವಿಜೇಂದ್ರ ಅವರು ಮಧ್ಯಾಹ್ನ ೧೨.೦೦ರವರೆಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ನಂತರ ದೇವಸ್ಥಾನಕ್ಕೆ ತೆರಳಿದ್ದರು.
ಸುಮಾರು ೧೨.೪೫ರ ಹೊತ್ತಿಗೆ ಹೊಗೆ ತುಂಬಿಕೊಂಡದ್ದನ್ನು ಆಸುಪಾಸಿನ ಅಂಗಡಿಯವರು ಹಾಗೂ ಸ್ಥಳಿಯರು ನೋಡಿ ಅಗ್ನಿಶಾಮಕ ಹಾಗೂ ಪೋಲೀಸರಿಗೆ ಫೋನ್ ಮಾಡಿದ್ದರು. ಅಗ್ನಿ ಶಾಮಕದವರು ಆಗಮಿಸಿ ಬೆಂಕಿ ನಂದಿಸುವ ಹೊತ್ತಿಗೆ ಸಂಪೂರ್ಣ ಸುಟ್ಟು ಹೋಗಿದ್ದು ಅಂದಾಜು ೩ ಲಕ್ಷಕ್ಕೂ ಮಿಕ್ಕಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬೈಂದೂರು ಪೋಲೀಸರು ಆಗಮಿಸಿ ಸ್ಥಳ ಪರಿಶೀಲಿಸಿದರು.