ದೇಶಕ್ಕೆ ಪುನರ್ಜನ್ಮ ಅಗತ್ಯ: ರಾಘವೇಶ್ವರ ಶ್ರೀ
ಗೋಕರ್ಣ: ದೇಶಕ್ಕೆ ಒಳ್ಳೆಯ ದಿನ ಬರಬೇಕಾದರೆ ದೇಶಕ್ಕೆ ಪುನರ್ಜನ್ಮದ ಅಗತ್ಯವಿದೆ. ಆಧುನಿಕ ಭಾರತದ ಜಾತಕದ ಪ್ರಕಾರ, ಸನಾತನ ಧರ್ಮದ ಪ್ರತೀಕವಾದ ಗುರು ಪ್ರತಿಕೂಲ ಅಥವಾ ಶತ್ರುಸ್ಥಾನದಲ್ಲಿದ್ದಾನೆ. ಇದರಿಂದ ಸನಾತನ ಧರ್ಮಕ್ಕೆ ಆಧುನಿಕ ಭಾರತದಲ್ಲಿ ಗೌರವ ಇಲ್ಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ವಿಶ್ಲೇಷಿಸಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ೩೪ನೇ ದಿನವಾದ ಶುಕ್ರವಾರ ಕಾಲ ಪ್ರವಚನ ಸರಣಿಯನ್ನು ಅನುಗ್ರಹಿಸಿದರು.
ಜ್ಯೋತಿಷದ ಮೂಲಕ ವ್ಯಕ್ತಿಗಳ ಜೀವನದಂತೆ ದೇಶದ ಅಥವಾ ವಿಶ್ವದ ವಿದ್ಯಮಾನಗಳನ್ನೂ ತಿಳಿದುಕೊಳ್ಳಲು ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ವಿವರಣೆU ನೀಡಿದ ಶ್ರೀಗಳು, ಜ್ಯೋತಿಷದ ಮೂಲಕ ಎಲ್ಲ ವ್ಯಕ್ತಿಗೆ, ವಿಷಯಗಳಿಗೆ ಮತ್ತು ಸಮಷ್ಟಿ ಮಾರ್ಗದರ್ಶನ ಸಾಧ್ಯ. ಇಡೀ ವಿಶ್ವದ ಆಗುಹೋಗುಗಳನ್ನು ಜ್ಯೋತಿಷ್ಯದ ಮೂಲಕ ತಿಳಿದುಕೊಳ್ಳಲು ಅವಕಾಶವಿದೆ. ಆಧುನಿಕ ಭಾರತಕ್ಕೂ ಒಂದು ಜಾತಕವಿದೆ. ಆಧುನಿಕ ಭಾರತ ಆವಿರ್ಭಾವವಾದದ್ದು ೧೯೪೭ರ ಆಗಸ್ಟ್ ೧೫ರಂದು. ಇದರ ಮೂಲಕ ದೇಶದ ಭವಿಷ್ಯವನ್ನು ತಿಳಿಯಲು ಸಾಧ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ವೃಷಭ ಲಗ್ನವಿದ್ದು, ದ್ವಿತೀಯದಲ್ಲಿ ಕುಜ ಮತ್ತು ಮಾಂದಿ, ತೃತೀಯದಲ್ಲಿ ರವಿ, ಚಂದ್ರ, ಬುಧ, ಶುಕ್ರ, ಶನಿ ಗ್ರಹಗಳಿವೆ. ಈ ಜಾತಕದ ಪ್ರಕಾರ ದೈವಾನುಕೂಲ ಇಲ್ಲ ಎಂದು ವಿಶ್ಲೇಷಿಸಿದರು.
ಯಾವ ಶುಭಗ್ರಹಗಳ ಅನುಕೂಲಗಳೂ ಇಲ್ಲ. ಲಗ್ನದಲ್ಲೂ ಯಾವುದೇ ಶುಭಗ್ರಹಗಳು ಉದಯವಿಲ್ಲ. ಲಗ್ನದಲ್ಲಿ ಇರುವುದು ರಾಹು. ಆದ್ದರಿಂದ ಪ್ರಧಾನ ವಿಷಯಗಳು ಅರ್ಧವಾಗುತ್ತವೆ. ರಾಹು ಅರ್ಧಸ್ವರೂಪದ ಪ್ರತೀಕ. ಆದ್ದರಿಂದ ದೇಶ ಕೂಡಾ ವಿಭಜನೆಯಾಯಿತು. ಪಾಪಗ್ರಹಗಳು ಮಾತ್ರ ಅನುಕೂಲ ಸ್ಥಾನದಲ್ಲಿವೆ. ಆದ್ದರಿಂದ ದೇಶಕ್ಕೆ ದುರವಸ್ಥೆ ಬಂತು ಎಂದು ವಿವರಿಸಿದರು.
ದೋಷ ಪರಿಹರಿಸುವ ಶಕ್ತಿ ಬುಧ ಹಾಗೂ ಶುಕ್ರಗ್ರಹಗಳಿವೆ. ಗುರುವಿಗೆ ಇರುವ ಶಕ್ತಿಯ ಕಾಲು ಭಾಗ ಬುಧನಿಗೆ ಹಾಗೂ ಅರ್ಧಭಾಗ ಶುಕ್ರನಿಗೆ ಇದೆ. ಚಂದ್ರನಿಗೆ ಬಲ ಇದ್ದರೆ ಮಾತ್ರ ಇತರ ಗ್ರಹಗಳಿಗೆ ಬಲ ಬರುತ್ತದೆ. ಎಲ್ಲ ಬಲದ ಮೂಲಸತ್ವ ಚಂದ್ರ. ಶುಕ್ರ- ಶನಿ ಗ್ರಹಗಳು ಅಸ್ತವಾಗಿವೆ. ರವಿ ಮೂರನೇ ಮನೆಯಲ್ಲಿದ್ದು, ಇದು ಅನುಕೂಲವಾದರೆ, ಮೂರನೇ ಮನೆಯಲ್ಲಿರುವ ಚಂದ್ರ ಕಲಹಕ್ಕೆ ಕಾರಣನಾಗುತ್ತಾನೆ. ಬುಧ ಅನುಕೂಲಕರ ಸ್ಥಾನದಲ್ಲಿರುವುದರಿಂದ ದೇಶಕ್ಕೆ ಪ್ರಬಲ ಸ್ಥಾನ ಬಂದಿದೆ ಎಂದರು.
ದೇಶದಲ್ಲಿ ಇತ್ತೀಚೆಗೆ ನಡೆದ ಮಹಾಚುನಾವಣೆಯನ್ನು ನೋಡಿದರೆ ಚುನಾವಣೆ ನಡೆದ ಸಂದರ್ಭದಲ್ಲಿ ಮೊದಲ ಎರಡು ಹಂತದಲ್ಲಿ ಗುರು ಗ್ರಹ ಅಸ್ತಮಾದಿಮುಖವಾಗಿದ್ದ. ಉಳಿದ ಐದು ಹಂತಗಳಲ್ಲಿ ಗುರು ಅಸ್ತನಾಗಿದ್ದ. ಆದರೆ ಜೂನ್ ೪ರಂದು ಫಲಿತಾಂಶ ಪ್ರಕಟವಾದ ದಿನ ಗುರು ಉದಯವಾಯಿತು. ಇದರಿಂದ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಬಾಲ್ಯಾವಸ್ಥೆಯಲ್ಲಿ ಗುರು ಇದ್ದ ಕಾರಣ ಆಡಳಿತ ಪಕ್ಷಕ್ಕೆ ಸ್ವಂತ ಬಲ ಇಲ್ಲದಾಯಿತು ಎಂದು ವಿಶ್ಲೇಷಿಸಿದರು.
ಶುಭ ಗ್ರಹಗಳು ದುರ್ಬಲವಾಗಿದ್ದು, ಪಾಪಗ್ರಹಗಳಿಗೆ ಬಲ ಅಧಿಕ ಇತ್ತು. ಇದರಿಂದ ಸನಾತನ ಧರ್ಮದ ಪರ ಇದ್ದ ಪಕ್ಷಕ್ಕೆ ಬಲಗುಂದಿತು. ಆದರೆ ೨೦೧೯ರ ಚುನಾವಣೆ ವೇಳೆಗೆ ಶುಭ ಗ್ರಹಗಳಿಗೆ ಬಲ ಇತ್ತು. ಇದರಿಂದ ಧರ್ಮದ ಪರ ಇದ್ದ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಿತು ಎಂದರು.
ಜಲಪ್ರಶ್ನವನ್ನು ವಿಶ್ಲೇಷಿಸಿದರು. ಮನೆಯನ್ನೇ ಒಂದು ರಾಶಿಚಕ್ರವಾಗಿ ಕಂಡುಕೊಂಡರೆ ಕುಂಭ ರಾಶಿಯಲ್ಲಿ ಅಥವಾ ಉತ್ತರಮುಖದ ಈಶಾನ್ಯದಲ್ಲಿ ಬಾವಿ ಬಂದರೆ ಆ ಜಾಗ ಸರ್ವಶ್ರೇಷ್ಠ, ಆದರೆ ಕನ್ಯಾರಾಶಿಯಲ್ಲಿ ಅಂದರೆ ನೈರುತ್ಯದಲ್ಲಿ ಬಾವಿ ನಿಷಿದ್ಧ ಎಂದು ಹೇಳಿದರು.
ಇಂದು ಅನಾವರಣಗೊಂಡ ತಿಗಳಾರಿ ಲಿಪಿ ಬಗ್ಗೆ ಉಲ್ಲೇಖಿಸಿ, ತಿಗಳಾರಿ ಲಿಪಿಯಲ್ಲಿ ನಿಗೂಢ ನಿಧಿ ಇದೆ. ಇದು ಅವಜ್ಞೆಗೆ ಒಳಗಾಗಿದೆ. ಇದನ್ನು ಕಲಿತು ಇದರಲ್ಲಿನ ಜ್ಞಾನವನ್ನು ನಮ್ಮದಾಗಿಸಿಕೊಳ್ಳೋಣ ಎಂದು ಹೇಳಿದರು.
ಹವ್ಯಕರ ನಿಗೂಢ ಲಿಪಿ ತಿಗಳಾರಿಯ ಮಹತಿಯನ್ನು ಅರ್ಪಿತಾ ಹೆದ್ಲಿ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಆಡಳಿತ ಖಂಡದ ಸಂಯೋಜಕ ಹಾರಕೆರೆ ನಾರಾಯಣ ಭಟ್, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಮಡಿವಾಳ, ಬೋವಿ ಮತ್ತು ನಾಡವರ ಸಮಾಜದಿಂದ ಸ್ವರ್ಣಪಾದುಕಾಪೂಜೆ ನೆರವೇರಿತು. ನಾಡವರ ಸಮಾಜದ ಮುಖಂಡರಾದ ನಿವೃತ್ತ ಡಿವೈಎಸ್ಪಿ ಪ್ರಮೋದ್‌ರಾವ್, ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯ ಪ್ರದೀಪ್ ನಾಯ್ಕ, ಉದ್ಯಮಿ ಆನಂದ ಕವರಿ, ನಿವೃತ್ತ ಪ್ರಾಚರ್ಯ ಬೀರಣ್ಣ ನಾಯಕ ಮತ್ತಿತರರು ಭಾಗವಹಿಸಿದ್ದರು.