ಕನ್ನಡ ಜ್ಯೋತಿ ರಥಯಾತ್ರೆಗೆ ಕೊತ್ತತ್ತಿಯಲ್ಲಿ ಅದ್ದೂರಿ ಸ್ವಾಗತ
ಸಂಜೆವಾಣಿ ವಾರ್ತೆ
ಮಂಡ್ಯ:ಆ.24: ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆ ಮಂಡ್ಯ ತಾಲೂಕಿಗೆ ಆಗಮಿಸಿದಾಗ ಕೊತ್ತತ್ತಿಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಗ್ರಾಮದ ವಿದ್ಯಾ ಗಣಪತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಜಾನಪದ ಕಲಾವಿದರ ಕಲಾ ಪ್ರದರ್ಶನ, ಪೂರ್ಣಕುಂಭ ಸ್ವಾಗತ, ಕನ್ನಡದ ಅಭಿಮಾನವನ್ನು ಮೂಡಿಸುವ ಗೀತೆಗಳು. ಎಲ್ಲೆಲ್ಲೂ ಕನ್ನಡ ಪರ ಜೈಕಾರ,ಶಾಲಾ ಮಕ್ಕಳ ಕಲರವದೊಂದಿಗೆ ಶ್ರೀರಂಗಪಟ್ಟಣ ತಹಸೀಲ್ದಾರ್ ಮಂಡ್ಯ ತಹಸೀಲ್ದಾರ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ ಕರ್ನಾಟಕ ಏಕೀಕರಣಗೊಂಡ 50 ವರ್ಷಗಳ ಬಳಿಕ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಕನ್ನಡಿಗರಲ್ಲಿ ಕನ್ನಡಾಭಿಮಾನದ ಜತೆಗೆ ಕನ್ನಡತನವನ್ನು ಬೆಳೆಸುವ ಉದ್ದೇಶದಿಂದ ಸರ್ಕಾರ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಹಮ್ಮಿಕೊಂಡಿದೆ. ಕನ್ನಡ ನಾಡು ನುಡಿ ಭಾಷೆಗೆ ತನ್ನದೆಯಾದ ಶ್ರೀಮಂತಿಕೆ ಇದ್ದು ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕು ಎಂದು ಕರೆ ನೀಡಿದರು. ನಂತರ ಬೇವಿನಹಳ್ಳಿಯಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಕ್ಯಾತುಂಗೆರೆ ಬಳಿಯ ಸಾಂಥೊಂ ಶಾಲೆಯ ಮಕ್ಕಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು,ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಬಿ.ಎಂ.ಅಪ್ಪಾಜಪ್ಪ,ಧನಂಜಯ ದರಸಗುಪ್ಪೆ,ಹೊಳಲು ಶ್ರೀಧರ್,ಸುಜಾತ ಕೃಷ್ಣ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ,ಕಾರಸವಾಡಿ ಮಹದೇವುಅರುಣಕುಮಾರಿ,ಕೊತ್ತತ್ತಿ ರಾಜುಬೆಲ್.ಕೃಷ್ಣ,ಮಂಜುನಾಥ್ ಬಲ್ಲೇನಹಳ್ಳಿ ಹಾಗೂ ತಾಲೂಕು ಆಡಳಿತ,ಶಾಲಾ ಆಡಳಿತ ಮಂಡಳಿ, ಮಕ್ಕಳು ಶಿಕ್ಷಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.ನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಿದಾಗ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವು ಗಣ್ಯರು ರಥಯಾತ್ರೆಗೆ ಸ್ವಾಗತ ಕೋರಿದರು. ನಂತರ ಮುಂದೆ ಸಾಗಿದ ರಥಯಾತ್ರೆ ಸಂಜಯ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಹೊಸಹಳ್ಳಿ, ಮಹಾವೀರ ವೃತ್ತ, ಮೈ ಷುಗರ್ ಫ್ಯಾಕ್ಟರಿ ವೃತ್ತದ ಮೂಲಕ ಮಾಂಡವ್ಯ ಜ್ಞಾನಸಾಗರ ಕ್ಯಾಂಪಸ್ ತಲುಪಿತು.
ನಂತರ ಮೂಲಕ ಉಮ್ಮಡಹಳ್ಳಿ, ಕೀಲಾರ, ಕೆರಗೋಡು ಮೂಲಕ ನಗರದ ರೈತ ಸಭಾಂಗಣವನ್ನು ತಲುಪಿತು. ರಥಯಾತ್ರೆ ವೇಳೆ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೆಂಪು-ಹಳದಿ ಬಣ್ಣದ ಶಾಲು ಧರಿಸಿಕೊಂಡು ಕೈಯಲ್ಲಿ ನಾಡ ಧ್ವಜ ಹಿಡಿದು ರಥದೊಂದಿಗೆ ಹೆಜ್ಜೆ ಹಾಕಿದರು.