ಹೆಡಿಯಾಲ ಗ್ರಾಮದಲ್ಲಿ ಆನೆ ಕ್ಯಾಂಪ್ ಅಸ್ತಿತ್ವಕ್ಕೆ
ಸಂಜೆವಾಣಿ ವಾರ್ತೆ
ನಂಜನಗೂಡು.ಆ.23:- ತಾಲೂಕಿನ ಹೆ ಡಿಯಾಲ ಗ್ರಾಮದ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಹೆ ಡಿಯಾಲ ಉಪ ವಿಭಾಗದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರ ಉಪಯೋಗಕ್ಕೆ ಬಾರದೆ ಸ್ಥಿತಿಯಲ್ಲಿತ್ತು ಇದನ್ನು ಮನಗಂಡ ಶಾಸಕ ದರ್ಶನ ಧ್ರುವ ನಾರಾಯಣ್ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಕಾಯಕಲ್ಪ ಮಾಡಲು ನಿರ್ಧರಿಸಿದರು ಅದರಂತೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರನ್ನು ಕೂಡ ಸ್ಥಳಕ್ಕೆ ಕರೆತರುವಲ್ಲಿ ಯಶಸ್ವಿಯಾಗಿ ಆನೆ ಕಾರ್ಯ ಪಡೆ ನಿಯಂತ್ರಣ ಕೊಠಡಿ ನಿರ್ಮಿಸಲು ಸಹಕರಿಸಲು ಮನವಿ ಮಾಡಿದರು ಅದರಂತೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದು ಉದ್ಘಾಟನೆ ಆಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ನಿವಾಸಿಗಳಿಗೆ ಇನ್ನು ಮುಂದೆ ನಿರಾಳ.ಆನೆಗಳ ದಾಳಿಯಿಂದಾಗಿ ಹಗಲಿರುಳು ಶ್ರಮಿಸಿ ಬೆಳೆದ ಬೆಳೆಗಳು ನಾಶವಾಗುತ್ತಿತ್ತು.ಆಸ್ತಿಪಾಸ್ತಿಗಳು ಕಳೆದು ಕೊಳ್ಳುವಂತಾಗುತ್ತಿತ್ತು.ಇನ್ಮುಂದೆ ಈ ಅವಾಂತರಗಳಿಗೆ ಬ್ರೇಕ್ ಹಾಕಲಾಗಿದೆ.ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಮೊಟ್ಟಮೊದಲ ಬಾರಿಗೆ ಆನೆ ಕ್ಯಾಂಪ್ ಸ್ಥಾಪನೆಯಾಗಿದೆ.ಶಾಸಕ ದರ್ಶನ್ ಧೃವನಾರಾಯಣ್ ಹಿಡಿದ ಪಟ್ಟು ಕಾರ್ಯರೂಪಕ್ಕೆ ಬಂದಿದೆ.ಕಾಡು ಪ್ರಾಣಿ ಮಾನವ ಸಂಘರ್ಷದಿಂದ ನೊಂದಿದ್ದ ಈ ಭಾಗದ ಜನ ನಿಟ್ಟುಸಿರು ಬಿಡುವಂತೆ ಶಾಸಕ ದರ್ಶನ್ ಧೃವನಾರಾಯಣ್ ಮಾಡಿದ್ದಾರೆ.ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಒತ್ತಡ ಹೇರುತ್ತಾ ಈ ಭಾಗದಲ್ಲಿನ ಜನಕ್ಕೆ ನೆಮ್ಮದಿ ತರುವ ಉದ್ದೇಶದಿಂದ ಆನೆ ಕ್ಯಾಂಪ್ ಸ್ಥಾಪನೆ ಮಾಡಬೇಕೆಂಬ ಯೋಜನೆಯನ್ನ ಕಾರ್ಯರೂಪಕ್ಕೆ ತಂದಿದ್ದಾರೆ.ಆನೆ ಕ್ಯಾಂಪ್ ಲೋಕಾರ್ಪಣೆಯಾಗಿದೆ.
ದೇಶದಲ್ಲಿಯೇ ಅತ್ಯಂತ ಹೆಚ್ಚು ಹುಲಿ ಮತ್ತು ಆನೆಗಳ ವಾಸಸ್ಥಾನ ಎಂದು ಪ್ರಖ್ಯಾತಿಗಳಿಸಿರುವ ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಅರಣ್ಯ ಉಪ ವಿಭಾಗದ ವ್ಯಾಪ್ತಿಯಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ಸಾಕಷ್ಟು ವರ್ಷಗಳಿಂದಲೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ನಿದ್ರೆಗೆಡಿಸಿತು.ಹೆಡಿಯಾಲ ಉಪವಿಭಾಗದ ಸುತ್ತಮುತ್ತಲ ನೂರಾರು ಹಳ್ಳಿಗಳ ರೈತ ಕುಟುಂಬ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳು ಆನೆ ಮತ್ತು ಇನ್ನಿತರ ಕಾಡುಪ್ರಾಣಿಗಳು ನಾಶಪಡಿಸುತ್ತಿದ್ದವು.
ಸಾಲ ಸೋಲ ಮಾಡಿ ಬೆಳೆದ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಮುಂದಾದಾಗ ನರಭಕ್ಷಕ ಹುಲಿಗಳ ಆರ್ಭಟಕ್ಕೆ ಸಿಲುಕಿ ರೈತರು ಜೀವ ಕಳೆದುಕೊಳ್ಳುತ್ತಿರುವ ಸಾಕಷ್ಟು ಘಟನೆಗಳು ನಡೆದಿವೆ. ಇಂತಹ ಅಹಿತಕರ ಘಟನೆಗಳಿಂದ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ದೊಡ್ಡ ಮಟ್ಟದಲ್ಲಿ ನಡೆಯುತ್ತಿತ್ತು. ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ನಡೆಸಿದ ಯಾವುದೇ ರಾಜಕಾರಣಿ ಪ್ರಾಣಿ ಮತ್ತು ಮಾನವ ಸಂಘರ್ಷವನ್ನು ತಡೆಯುವಲ್ಲಿ ಎದೆಗಾರಿಕೆ ತೋರಿರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ರೈತರ ಸಮಸ್ಯೆಗಳಿಗೆ ಭರವಸೆ ನೀಡಿ ಚುನಾವಣೆ ಮುಗಿದ ಬಳಿಕ ಕಾಡಂಚಿನ ಗಡಿ ಗ್ರಾಮದ ರೈತರನ್ನ ನಿರ್ಲಕ್ಷಿಸುತ್ತಿದ್ದರು.ಆದರೆ ನಂಜನಗೂಡಿನ ಯುವ ಶಾಸಕ ದರ್ಶನ್ ಧ್ರುವನಾರಾಯಣ ತಾವು ವಿಭಿನ್ನ ಎಂಬಂತೆ ಹೊಸ ಮೈಲಿಗಲ್ಲಿಗೆ ನಾಂದಿ ಹಾಡಿದ್ದಾರೆ. ಸಂಕಷ್ಟದಲ್ಲಿರುವ ಜನರ ಅಮೂಲ್ಯ ಮತಗಳನ್ನು ಪಡೆದು ಅವರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿದು ಸಾಕಷ್ಟು ವರ್ಷಗಳಿಂದ ನಿರಂತರವಾಗಿ ನಡೆದು ಬಂದಿದ್ದ ಸಂಘರ್ಷಕ್ಕೆ ಇಂದು ತೆರೆ ಎಳದಿದ್ದಾರೆ.
ಹೆಡಿಯಾಲ ಅರಣ್ಯ ಉಪ ವಿಭಾಗದಲ್ಲಿ ಡಿ ಸಿ ಎಫ್ ಪ್ರಭಾಕರನ್ ನೇತೃತ್ವದಲ್ಲಿ ಆನೆ ಕ್ಯಾಂಪ್ ಕೊಠಡಿಯನ್ನು ಉದ್ಘಾಟನೆ ಮಾಡಿ ಗಡಿಭಾಗದ ಜನರ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಾಣಿಗಳು ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶದಿಂದ ಹೊರಬರುವಂತಿಲ್ಲ. ದಿನದ 24 ಗಂಟೆಯಲ್ಲಿಯೂ ರಾತ್ರಿ ಹಗಲು ಆನೆ ಕ್ಯಾಂಪ್ ಕೊಠಡಿಯಲ್ಲಿ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಅತಿ ಹೆಚ್ಚು ಸಿಬ್ಬಂದಿಗಳಿಗೆ ಆನೆ ಕ್ಯಾಂಪ್ ಕೊಠಡಿಯಲ್ಲಿ ಕಾರ್ಯನಿರ್ವಹಿಸುವಂತೆ ತರಬೇತಿ ನೀಡಲಾಗಿದೆ. ಅರಣ್ಯ ಇಲಾಖೆಯ ವತಿಯಿಂದ ಎಲ್ಲಾ ರೀತಿಯ ಸಿದ್ಧತೆ ಕಾರ್ಯಗಳನ್ನು ಮಾಡಿ ರೈತರಿಗೆ ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ಆನೆ ಕ್ಯಾಂಪ್ ಕೊಠಡಿ ಸಿಬ್ಬಂದಿಗಳು ಸೇವೆ ಮಾಡಲಿದ್ದಾರೆ.
ಇದೇ ವೇಳೆ ಅರಣ್ಯ ಇಲಾಖೆ ವತಿಯಿಂದ ಎಸ್ಸಿಪಿ ಮತ್ತು ಟಿ ಎಸ್ ಪಿ ಯೋಜನೆಯಡಿಯಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಆದಿವಾಸಿಗಳ ವಿದ್ಯಾರ್ಥಿಗಳಿಗೆ ಸೋಲಾರ್ ದೀಪ ವಿತರಿಸಿದರು.
ಈ ಸಂದರ್ಭದಲ್ಲಿ ಡಿ ಸಿ ಎಫ್ ಪ್ರಭಾಕರನ್ , ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷರಾದ ಕೆ. ಮಾರುತಿ ರವರು, ಹೆಡಿಯಾಲ ನಾಗರಾಜೇ ಗೌಡ ಎಸಿಎಫ್ ಸತೀಶ್ ಆರ್‍ಎಫ್‍ಒ ನಾರಾಯಣ, ಸರಿತಾ ರವರು ಅರಣ್ಯ ಅಧಿಕಾರಿಗಳು, ಗ್ರಾ. ಪಂ ಮಾಜಿ ಅಧ್ಯಕ್ಷ ಅಶ್ರಫ್ ಅಲಿ ನೇಮತ್ ಉಲ್ಲಾಖಾನ್, ಉಪಾಧ್ಯಕ್ಷ ನಾಗೇಶ್ ಗ್ರಾ.ಪಂ ಬಿಲ್ ಕಲೆಕ್ಟರ್ ಮನು ಪಕ್ಷದ ಇತರೆ ಮುಖಂಡರು ಗ್ರಾಮಸ್ಥರುಗಳು ಹಾಜರಿದ್ದರು.