ಆರೋಗ್ಯ ಉಪಕೇಂದ್ರ ಮಂಜೂರಾತಿಗೆ ಮನವಿ
ಕೋಲಾರ,ಆ,೨೩- ತಾಲೂಕಿನ ವಕ್ಕಲೇರಿ ಹೋಬಳಿ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಿ ಮೈಲಾಂಡಹಳ್ಳಿ ಆರೋಗ್ಯ ಉಪಕೇಂದ್ರ ಮಂಜೂರು ಮಾಡುವಂತೆ ಶಾಸಕ ಕೊತ್ತೂರು ಮಂಜುನಾಥ್ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ರಿಗೆ ಮನವಿ ಸಲ್ಲಿಸಿದರು
ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸಚಿವರು ಆಗಮಿಸಿದ ಸಂದರ್ಭದಲ್ಲಿ ಮನವಿ ಮಾಡಿದ ಅವರು ವಕ್ಕಲೇರಿ ಹೋಬಳಿ ಕೇಂದ್ರವಾಗಿದ್ದು, ಸುಮಾರು ೪೦ ಗ್ರಾಮಗಳಿಗೆ ಮುಖ್ಯ ಸಂಪರ್ಕ ಕೊಂಡಿಯಾಗಿದೆ ಸದರಿ ಗ್ರಾಮದಲ್ಲಿ ವಿದ್ಯುತ್ ಸಬ್ ಸ್ಟೇಷನ್, ನಾಡಕಛೇರಿ, ಬ್ಯಾಂಕ್ ಹಾಗೂ ೧೦ ಕ್ಕಿಂತಲೂ ಹೆಚ್ಚು ಶಾಲೆಗಳು ಸೇರಿದಂತೆ ಹಾಗೂ ನವೋದಯ ಕೇಂದ್ರೀಯ ಶಾಲೆ ಇದ್ದು ಗ್ರಾಮದಲ್ಲಿ ಸರಿಸುಮಾರು ೬ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ಇದ್ದು, ತುರ್ತು ಚಿಕಿತ್ಸೆಗಾಗಿ ಕೋಲಾರಕ್ಕೆ ಹೋಗಬೇಕಾಗಿರುತ್ತದೆ, ಸಾರ್ವಜನಿಕ ಹಿತದೃಷ್ಟಿಯಿಂದ ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಕಟ್ಟಡವನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಮೈಲಾಂಡಹಳ್ಳಿ ಗ್ರಾಮವು ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತುಂಬಾ ದೂರವಿದೆ, ಗ್ರಾಮದಲ್ಲಿ ೧೨೦೦ ಜನಸಂಖ್ಯೆ ಇದ್ದು, ಅದರಲ್ಲಿ ಹಿರಿಯ ನಾಗರೀಕರಿಗೆ, ಗರ್ಭಿಣಿ ಸ್ತ್ರೀಯರಿಗೆ, ಅಂಗವಿಕಲರಿಗೆ ಹಾಗೂ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಬಹಳ ಅನಾನುಕೂಲವಾಗುತ್ತಿದ್ದು, ಮೈಲಾಂಡಹಳ್ಳಿ ಗ್ರಾಮಕ್ಕೆ ಆರೋಗ್ಯ ಉಪಕೇಂದ್ರ ನಿರ್ಮಾಣ ಮಾಡುವುದರಿಂದ ಸುತ್ತಮುತ್ತಲಿನ ಗ್ರಾಮಗಳಾದ ತಿರುಮಲಕೊಪ್ಪ, ಗಂಗಾಪುರ, ಲಕ್ಷ್ಮೀಪುರ, ಮಲ್ಲೇಶ್ವರನಗರ, ಕೂತಾಂಡಹಳ್ಳಿ ಮುಂತಾದ ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಈ ಸಂಭಂದಿಸಿದಂತೆ ಈಗಾಗಲೇ ೨ ಬಾರಿ ಮನವಿ ಸಲ್ಲಿಸಲಾಗಿದೆ, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಸಹ ಆರೋಗ್ಯ ಉಪಕೇಂದ್ರ ಮಂಜೂರು ಮಾಡಲು ಶಿಫಾರಸ್ಸು ಮಾಡಿದ್ದಾರೆ, ಕೂಡಲೇ ಮೈಲಾಂಡಹಳ್ಳಿ ಗ್ರಾಮಕ್ಕೆ ಆರೋಗ್ಯ ಉಪಕೇಂದ್ರವನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ. ಮೈಲಾಂಡಹಳ್ಳಿ ಮುರಳಿ ಇದ್ದರು.