ನಿಂಬರ್ಗಾ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 160 ಮಂದಿ ಅಸ್ವಸ್ಥ: ಸ್ಥಳೀಯರ ಅಳಲು ಆಲಿಸಿದ ಶಾಸಕ ಬಿ.ಆರ್. ಪಾಟೀಲ್, ತಪ್ಪಿತಸ್ಥ ಸಿಬ್ಬಂದಿಗೆ ವಜಾಗೊಳಿಸಲು ಸೂಚನೆ
ಆಳಂದ:ಅ.2: ಕಲುಷಿತ ನೀರು ಸೇವನೆಯಿಂದ ನಿಂಬರ್ಗಾ ಗ್ರಾಮದಲ್ಲಿ 160ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಇದರಿಂದ ಗ್ರಾಮದಲ್ಲಿ ಆತಂಕ ಮತ್ತು ಆಕ್ರೋಶ ಮಂಗಳವಾರವೂ ಮುಂದುವರೆದಿದೆ.
ಕಳೆದ ಭಾನುವಾರ 80 ಮಂದಿ ಆಸ್ಪತ್ರೆಗೆ ದಾಖಲಾದರೆ, ಸೋಮವಾರ ಮತ್ತು ಮಂಗಳವಾರ ಈ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಚಿಕಿತ್ಸೆ ಕಾರ್ಯ ಮುಂದುವರಿದಿದ್ದು, ಇದಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರಿಗೆ ಗ್ರಾಮದ ಜನತೆ ತಮ್ಮ ಅಳಲುಗಳನ್ನು ತೋಡಿಕೊಂಡಿದ್ದಾರೆ.
ಗ್ರಾಮಕ್ಕೆ ಹಠಾತ್ ಭೇಟಿ ನೀಡಿದ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್. ಪಾಟೀಲ್ ಅವರು ರೋಗಿಗಳ ಆರೋಗ್ಯ ವಿಚಾರಿಸಿ, ವೈದ್ಯಕೀಯ ವ್ಯವಸ್ಥೆಯನ್ನು ಪರಿಶೀಲಿಸಿದರು. ರೋಗಿಗಳ ಆರೋಗ್ಯ ವಿಚಾರಿಸಿ ಚಿಕಿತ್ಸೆ ವ್ಯವಸ್ಥೆಯ ಮಾಹಿತಿ ಪಡೆದುಕೊಂಡರಲ್ಲದೆ, ರೋಗಿಗಳಿಗೆ ತಾವು ತಂದ ಹಣ್ಣು ಹಂಪಲಗಳನ್ನು ವಿತರಿಸಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ವಿವರಿಸಿದರು.
ನಂತರ ಶಾಸಕರು ಭೂವಿ ಬಡಾವಣೆಗೆ ಭೇಟಿ ನೀಡಿದ ವೇಳೆ ಸ್ಥಳೀಯರು ಸಮಸ್ಯೆಯಿಂದ ಜನರ ಆರೋಗ್ಯದ ಮೇಲಾಧ ಅವಘಟವನ್ನು ಬಿಚ್ಚಿಟ್ಟರು.
ನೀರಿನ ಪೂರೈಕೆ ಸಮಸ್ಯೆ: ಜನರು ತಮ್ಮ ಮನೆಯೊಂದೇ ನೀರಿನ ಪೂರೈಕೆಗೆ ಅವಲಂಬಿತರಾಗಿದ್ದು, ಪೂರೈಕೆಗೆ ಬರುವ ನೀರು ಅತ್ಯಂತ ಕೆಸರಿನಿಂದ ಕೂಡಿತ್ತು ಎಂದು ಹೇಳಿದರು. ಈ ನೀರನ್ನು ಕುಡಿಯಲು ಮತ್ತು ಅಡುಗೆಗಾಗಿ ಬಳಸುವುದು ಅಸಾಧ್ಯವಾಗಿದ್ದು, ಇದರಿಂದ ಅನೇಕರು ಅಸ್ವಸ್ಥರಾಗಿದ್ದಾರೆ. ಈ ಕುರಿತು ಗ್ರಾಪಂನವರಿಗೆ ಹೇಳಿದರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.
ಸಮಯೋಚಿತ ಪ್ರತಿಕ್ರಿಯೆಯ ಕೊರತೆ: ಸ್ಥಳೀಯರ ಪ್ರಕಾರ, ನೀರು ಕಲುಷಿತವಾಗಿರುವ ಬಗ್ಗೆ ಅವರು ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಇದಕ್ಕೆ ತುರ್ತು ಕ್ರಮ ಕೈಗೊಳ್ಳಲಾಗಲಿಲ್ಲ. ಇದು ಸಮಸ್ಯೆ ಗಂಭೀರವಾದ ಮೇಲೆ ಮಾತ್ರ, ಅಧಿಕಾರಿಗಳು ಬಂದಿದ್ದಾರೆ ಎಂದರು. ಹಲವು ಗ್ರಾಮಸ್ಥರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಶಾಲಾ ಮಕ್ಕಳಲ್ಲಿ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಿದ್ದು, ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಕಷ್ಟು ಅನಿವಾರ್ಯತೆಗಳಿವೆ ಎಂದು ತಿಳಿಸಿದರು.
ನೀರು ಸರಬರಾಜು ಟ್ಯಾಂಕ್‍ಗಳು ಸಮಯಮಿತಿಯಲ್ಲಿ ಸ್ವಚ್ಛತೆಗೊಂಡಿಲ್ಲ, ಅದರಿಂದ ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂಬುದು ಜನರ ಅಳಲು. ಹೀಗಾಗಿ, ಪೂರೈಕೆ ವ್ಯವಸ್ಥೆಯ ಮೇಲೆ ದೃಢ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ಶಾಸಕರು ಜನರ ಆವಾಲುಗಳನ್ನು ಆಲಿಸಿ, ಕೋಪಗೊಂಡು ತಕ್ಷಣವೇ ತಪಾಸಣೆ ನಡೆಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರಿಗೆ ಕಳುಷಿತ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವಂತೆ ಸೂಚಿಸಿದರು. “ಇಂತಹ ನಿರ್ಲಕ್ಷ್ಯ ಜನರ ಜೀವಗಳನ್ನು ಅಪಾಯಕ್ಕೆ ತಳ್ಳುವಂತದ್ದು. ನೀರು ಪೂರೈಕೆ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದಿದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪಾಟೀಲ್ ಹೇಳಿದರು. ಕೂಡಲೇ ಗ್ರಾಪಂನ ತಪ್ಪಿತಸ್ಥ ಸಿಬ್ಬಂದಿ ಯಾರೇ ಆಗಿರಲಿ ವಜಾಗೊಳಿಸಬೇಕು ಎಂದು ಸೂಚನೆ ನೀಡಿದರು.
ತದನಂತರ ಗ್ರಾಮ ಪಂಚಾಯತಿ ಸಭೆಯಲ್ಲಿ, ಸ್ಥಳೀಯರು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ ಶಾಸಕರು, “ಗ್ರಾಮಸ್ಥರ ಆರೊಗ್ಯ ನಮ್ಮ ಮೊದಲ ಆದ್ಯತೆ. ನೀರು ಪೂರೈಕೆಯ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು, ಮತ್ತು ಅಗತ್ಯವಿದ್ದಲ್ಲಿ ಹೊಸ ಟ್ಯಾಂಕ್‍ಗಳನ್ನು ನಿರ್ಮಿಸಬೇಕು,” ಶಾಸಕರು ತಹಸಿಲ್ದಾರ್, ಗ್ರಾಪಂ ಅಧಿಕಾರಿಗಳು, ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿಯಮಿತ ಪರಿಶೀಲನೆ ಮಾಡುತ್ತಾ ನೀರಿನ ಗುಣಮಟ್ಟವನ್ನು ಕಾಪಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಮತ್ತು ಸ್ವಚ್ಛತೆಯನ್ನು ಕಾಪಾಡಲು ವಿಶೇಷ ತಂಡವನ್ನು ರಚಿಸಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರೇಖಾ ಚೌಹಾನ್, ತಹಸಿಲ್ದಾರ್ ಅಣ್ಣಾರಾವ್ ಪಾಟೀಲ್, ಉಪ ತಹಸಿಲ್ದಾರ್ ಮಹೇಶ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಮತ್ತು ಇನ್ನಿತರ ಅಧಿಕಾರಿಗಳು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಸಮಸ್ಯೆಗೆ ಸಕಾರಾತ್ಮಕ ಪರಿಹಾರ: ಜನರ ಅಳಲುಗಳನ್ನು ಗಮನಿಸಿದ ಶಾಸಕರು, ಕಲುಷಿತ ನೀರು ಸಮಸ್ಯೆಯನ್ನು ಪರಿಹರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ 24 ಗಂಟೆಗಳ ಗಡುವನ್ನು ನೀಡಿದ್ದಾರೆ. “ಜನರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯ,” ಎಂದು ಹೇಳಿದರು. ಈ ಎಲ್ಲಾ ಕ್ರಮಗಳು ನಿಂಬರ್ಗಾ ಗ್ರಾಮದ ಜನತೆಗೆ ಸ್ವಚ್ಛ ನೀರಿನ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಾಕಷ್ಟು ಎಚ್ಚರಿಕೆ ವಹಿಸುವ ಬಗ್ಗೆ ಶಾಸಕರು ಜನತೆಗೆ ಭರವಸೆ ನೀಡಿದರು.