ಭಾರತದ ಏಳಿಗೆಗಾಗಿ ಮೌಲ್ಯಯುತ ಶಿಕ್ಷಣ ನೀಡಿ: ಎಸ್.ಬಿ. ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೨: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕುಟುಂಬ, ಶಾಲೆ, ಸ್ನೇಹಿತರು, ಸಮಾಜ, ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಖ್ಯಾತ ವಾಗ್ಮಿ ಎಸ್.ಬಿ. ಪಾಟೀಲ ಹೇಳಿದರು.
ನಗರದ ಕುಮಾರಿ ಮೋನಿಕಾ ಬಸವರಾಜ ಕಣ್ಣಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾರತೀಯ ಶಿಕ್ಷಣ ಮಂಡಲದ ವತಿಯಿಂದ ಹಮ್ಮಿಕೊಂಡ ‘ಮೌಲ್ಯಯುತ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ’ ಕುರಿತು ಮಾತನಾಡಿದರು.
ನೈತಿಕ ಮೌಲ್ಯವು ವಿದ್ಯಾರ್ಥಿಗಳ ಜೀವನದ ರೂಪುರೇಷೆಯನ್ನೇ ಬದಲಿಸುತ್ತದೆ. ಶಿಕ್ಷಣ ನೀಡಿಕೆ ನಿಜಕ್ಕೂ ಪವಿತ್ರ ಕಾರ್ಯ. ನಿಸ್ವಾರ್ಥತೆಯಿಂದ ಶಿಕ್ಷಣ ನೀಡಿದಷ್ಟು ಉತ್ತಮ ಫಲ ದೊರೆಯುತ್ತದೆ ಎಂದು ಹೇಳಿದರು.
ರಾಜಕುಮಾರ ಮಾಲಿಪಾಟೀಲ ಮಾತನಾಡಿ, ಭಾರತದ ಏಳಿಗೆಗಾಗಿ, ಶಿಕ್ಷಣದ ಬದಲಾವಣೆಗಾಗಿ ಮೌಲ್ಯಯುತ ಶಿಕ್ಷಣ ನೀಡಿ, ಉತ್ತಮ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಶ್ರಮ ಅಮೂಲ್ಯವಾದದ್ದು ಎಂದು ಹೇಳಿದರು.
ಮಹಿಳಾ ಗತಿ ವಿಧಿಯ ಪ್ರಮುಖ ಡಾ. ಸುಮಾ ಬೋಳರಡ್ಡಿ ಮಾತನಾಡಿ, ಭಾರತೀಯ ಶಿಕ್ಷಣ ಮಂಡಲವು ೧೯೬೯ ರಿಂದ ಪ್ರಾರಂಭವಾಗಿ ಇಲ್ಲಿಯವರೆಗೂ ಶಿಕ್ಷಣ ರಂಗದಲ್ಲಿ ಸಂಪೂರ್ಣ ಭಾರತೀಕರಣ ತರುವ ಉದ್ಧೇಶ ಹೊಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ರಾಮಚಂದ್ರ ಮೋರೆ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ಸಹಾನುಭೂತಿ ಮತ್ತು ನಿರಂತರ ಸ್ವಯಂ-ಸುಧಾರಣೆಯ ಪ್ರಾಮುಖ್ಯತೆಯನ್ನು ತುಂಬುತ್ತಾರೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ಯುವ ಗತಿ ವಿಧಿ ಸಹ ಪ್ರಮುಖ ಮಲ್ಲಿಕಾರ್ಜುನ ಪಾಟೀಲ ಹಾಗೂ ಕಾಲೇಜಿನ ಎಲ್ಲಾ ಶಿಕ್ಷಕರು, ಪ್ರಶಿಕ್ಷಣಾರ್ಥಿಗಳು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ಜ್ಯೋತಿ ಲಕ್ಷ್ಮಿ ಇರಸೂರು ಸ್ವಾಗತಿಸಿ ಪರಿಚಯಿಸಿದರು. ಸೌರಭ ನಿರೂಪಿಸಿದರು. ಸಿದ್ದು ಮದರಖಂಡಿ ವಂದಿಸಿದರು.