ಕಿಶೋರ ಕಾರ್ಮಿಕರ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ; ತಹಶೀಲ್ದಾರ್ ಸುರೇಶ ವರ್ಮ
ರಾಯಚೂರು,ಆ.೨೧- ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ವ್ಯಾಪಕ ಪ್ರಚಾರ ಮತ್ತು ಜನರಲ್ಲಿ ತಿಳುವಳಿಕೆಯನ್ನು ಮೂಡಿಸಬೇಕು. ನಂತರ ಹಠಾತ್ ದಾಳಿಗಳನ್ನುಕೈಗೊಂಡು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೆಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮಾ ಅವರು ಹೇಳಿದರು.
ಅವರು ಆ.೧೯ರ ಸೋಮವರ ದಂದು ನಗರದ ತಹಶೀಲ್ದಾರರ ಕಚೇರಿಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ತಾಲೂಕ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಇನ್ನುಮುಂದೆ ಯಾವುದೇ ಕಾರಣಕ್ಕೂ ಮಕ್ಕಳನ್ನು ಕೆಲಸಕ್ಕೆ ಕಳುಹಿಸಬಾರದೆಂದು ಎಚ್ಚರಿಕೆ ನೀಡಿ, ಮಕ್ಕಳನ್ನು ಪ್ರತಿ ನಿತ್ಯ ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ತಾಕೀತು ಮಾಡಿದರು. ಸ್ಟಿಕರ್‍ಸ್ ಮತ್ತು ಕರಪತ್ರಗಳನ್ನು ಅಂಟಿಸುವ ಅಥವಾ ಹಂಚುವುದರ ಮುಖಾಂತರ ಜಾಗೃತಿಯನ್ನು ಮೂಡಿಸಬೇಕೆಂದರು.
ನಗರದ ವಿವಿದ ಕಡೆ ತಪಾಸಣೆ: ರಾಯಚೂರು ತಾಲೂಕು ಟಾಸ್ಕ್ ಪೋರ್ಸ್ ತಂಡವು ರಾಯಚೂರು ನಗರದಾದ್ಯಂತ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ಕಿರಾಣಿ ಅಂಗಡಿ, ಗ್ಯಾರೇಜ್ ಮತ್ತು ಇನ್ನಿತರ ಉದ್ದಿಮೆಗಳನ್ನು ತಪಾಸಣೆ ಕೈಗೊಂಡಾಗ ಮೆ|| ಮಹಾಲಕ್ಷ್ಮೀ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯನ್ಸಸ್ ರಾಯಚೂರುನಲ್ಲಿ ಒಬ್ಬ ಕಿಶೋರ ಕಾರ್ಮಿಕ ಮತ್ತು ಮೆ|| ಅಮಿತ್ ಡಿಜಿಟಲ್ ಎಲೆಕ್ಟ್ರಾನಿಕ್ಸ್, ಮಾತಾ ವೈನ್ಸ್ ಎದುರುಗಡೆ, ಗಂಜ್ ರಸ್ತೆ, ರಾಯಚೂರುನಲ್ಲಿ ಒಬ್ಬ ಕಿಶೋರ ಕಾರ್ಮಿಕನು ಕೆಲಸ ಮಾಡುತ್ತಿರುವುದು ಕಂಡುಬಂದಿದ್ದು, ಆ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿ, ರಾಯಚೂರಿನ ಸರಕಾರಿ ಬಾಲಕರ ಬಾಲ ಮಂದಿರವರಿಗೆ ಒಪ್ಪಿಸಲಾಯಿತು.
ಮಕ್ಕಳನ್ನು ಕೆಲಸಕ್ಕೆ ನೇಮಕಮಾಡಿಕೊಂಡಿದ್ದ ಮೆ|| ಮಹಾಲಕ್ಷ್ಮೀ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಾಯನ್ಸಸ್ ಮಾಲೀಕರಾದ ರಾಜೇಶ್ ತಂದೆ ಗುರ್ರಪ್ಪ, ಮತ್ತು ಮೆ|| ಅಮಿತ್ ಡಿಜಿಟಲ್ ಎಲೆಕ್ಟ್ರಾನಿಕ್ಸ್‌ನ ಮಾಲೀಕರಾದ ನವೀನ್‌ಕುಮಾರ ತಂದೆ ಹೀರಾಲಾಲ್ ಅವರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ರಾಯಚೂರಿನ ನೇತಾಜಿನಗರ ಪೊಲೀಸ್ ಠಾಣೆ ಪ್ರಕರಣ ದಾಖಲು ಮಾಡಲಾಯಿತು.
ಈ ವೇಳೆ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ ಅವರು ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ೨೦೧೬ರಂತೆ ೧೪ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೂ ೧೫ರಿಂದ ೧೮ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ದುಡಿಸಿಕೊಂಡಲ್ಲಿ ೫೦,೦೦೦/-ರೂ.ಗಳ ದಂಡ ಹಾಗೂ ೨ವರ್ಷ ಜೈಲು ಶಿಕ್ಷೆ ಇರುತ್ತದೆ ಎಂದರು.
ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದುಡಿಯುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-೧೦೯೮ಗೆ ಮಾಹಿತಿ ನೀಡಬಹುದಾಗಿದೆಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮುದುಕಪ್ಪ, ರಾಯಚೂರಿನ ೧ನೇ ವೃತ್ತ ಕಾರ್ಮಿಕ ನಿರೀಕ್ಷಕರಾದ ಮಹ್ಮದ್ ಉಮರ್ ಅಬ್ದುಲ್ ಘನಿ, ೨ನೇ ವೃತ್ತ ಕಾರ್ಮಿಕ ನಿರೀಕ್ಷಕರಾದ ಪ್ರಿಯಾಂಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆಯ ಸೂಪರಿಡೆಂಟ್ ರಮೇಶ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಒ ಮಂಜುನಾಥ ಸೇರಿದಂತೆ ಇತರರು ಇದ್ದರು.