ಅರಸು ಅವರ ತತ್ವ ಆದರ್ಶಗಳನ್ನು ಯುವ ಪೀಳಿಗೆಗೆ ತಿಳಿಸಿ; ಸಚಿವ ಎನ್.ಎಸ್.ಬೋಸರಾಜು
ಜಿಲ್ಲಾಡಳಿತ ವತಿಯಿಂದ ಅರಸು ಅವರ ೧೦೯ನೇ ಜನ್ಮ ದಿನಾಚರಣೆ, ನಗರದಲ್ಲಿ ಅರಸು ಭಾವಚಿತ್ರ ಮೆರವಣಿಗೆ
ರಾಯಚೂರು,ಆ.೨೧-
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರದ ಪರಿವರ್ತನೆಯ ಹರಿಕಾರ, ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ಮನಮುಟ್ಟಿಸುವ ಕೆಲಸ ದಿನಾಚರಣೆಯಲ್ಲಿ ಆಗಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಹೇಳಿದರು.
ಅವರು ಆ.೨೦ರ ಮಂಗಳವಾರ ದಂದು ನಗರದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ದೇವರಾಜ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ದೇವರಾಜ ಅರಸು ಕರ್ನಾಟಕದ ಅಪರೂಪದ ರಾಜಕಾರಣಿ. ಅರಸು ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದರು. ಅರಸು ಅವರು ಹಾವನೂರು ಆಯೋಗ ವರದಿ ತರಿಸಿ ಮೀಸಲಾತಿ ಜಾರಿ ಮಾಡಿದರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಸರ್ವಾಂಗಣಿಯ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸದಾಸಿದ್ಧವಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ೫ಸಾವಿರ ಕೋಟಿ ರೂ.ಗಳನ್ನು ಮೀಸಲಾಗಿಸಲಾಗಿದೆ ಎಂದರು.
ಈ ವೇಳೆ ರಾಯಚೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಜಿ.ಕುಮಾರ ನಾಯಕ ಅವರು ಮಾತನಾಡಿ, ಡಿ.ದೇವರಾಜ ಅರಸು ಮಾಡಿದ ಕಾರ್ಯ ಅಭಿವೃದ್ಧಿಗಳು ಇಂದಿಗೂ ಇದ್ದು, ಅವರು ಹಾಕಿಕೊಟ್ಟ ಮಾರ್ಗ ಎಂದಿಗೂ ಮರೆಯಬಾರದು ಎಂದು ಹೇಳಿದರು.
ಉಳುವವನೆ ಭೂಒಡೆಯ ಜಾರಿಗೆ ತರುವ ಮೂಲಕ ಜನರ ನಾಡಿಮಿಡಿತದಲ್ಲಿ ಶಾಶ್ವತವಾಗಿದ್ದಾರೆ. ಕರ್ನಾಟಕದ ದೊಡ್ಡ ರಾಜಕಾರಣಿಯಾಗಿದ್ದಾರೆ. ಬಡತನ ನಿರ್ಮೂಲನೆಗಾಗಿ, ಸಮಾನತೆಗಾಗಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಮಾತನಾಡಿ, ದೇವರಾಜ ಅರಸು ಅವರ ಕರ್ಮಭೂಮಿಯಾದ ಮೈಸೂರಿನ ಹುಣಸೂರಿನಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದು, ನನಗೆ ಹೆಮ್ಮೆ ಇದೆ. ಅನೇಕ ರೀತಿಯ ಕ್ರಾಂತಿಕಾರಿ ಬೆಳವಣಿಗೆಯ ಕೆಲಸ, ಕಾರ್ಯಗಳು ಮಾಡಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಬಲಿ?ರ ಭೂಮಿಯನ್ನು ಜನಸಾಮಾನ್ಯರಿಗೆ ಹಂಚಿಕೆ ಮಾಡಿದ್ದಾರೆ ಎಂದು ಹೆಳಿದರು.
ದೇವರಾಜ ಅರಸು ೧೯೭೨ರಿಂದ ೧೯೮೦ರವರೆಗೆ ಮುಖ್ಯಮಂತ್ರಿಯಾಗಿದ್ದರು. ಹುಣಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು. ಬಡವರ ಪರವಾಗಿ ಇದ್ದವರು. ಅಧಿಕಾರದಲ್ಲಿದ್ದಾಗಿ ನ್ಯಾಯ ಕೊಡಿಸಲು ಪ್ರಯತ್ನ ಮಾಡಿದರು. ಮಲ ಹೊರುವ ಪದ್ದತಿ ನಿಲ್ಲಿಸುವ ಮೂಲಕ ಜೀತಪದ್ದತಿಗೆ ಮಂಗಳ ಹಾಡಿದರು. ಅದಕ್ಕಾಗಿ ನಾವು ಅವರನ್ನು ಸಾಮಾಜಿಕ ನ್ಯಾಯ ಹರಿಕಾರ ಅಂತ ಕರೆಯುತ್ತೇವೆ ಎಂದು ತಿಳಿಸಿದರು.
ಹಿಂದುಳಿದ ಇಲಾಖೆಯಿಂದ ಸೌಲಭ್ಯ ಪಡೆಯುತ್ತಿರುವ ಎಲ್ಲರೂ ಅರಸು ಅವರನ್ನು ನೆನೆಯಬೇಕು. ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ, ಸಾಮಾಜಿಕ, ಸಮಾನತೆ ತರಲು ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಅಂಗವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಪೂರ್ಣಿಮಾ ತಂದೆ ವಿರೇಶ, ರಾಜೇಶ್ವರಿ ತಂದೆ ಮಲ್ಲೇಶ, ಪಿ.ಯು.ಸಿ ವಿಭಾಗದಲ್ಲಿ ಶ್ರೀಧರ ತಂದೆ ದೇವಪ್ಪ, ಸಹನಾ ತಂದೆ ಬಾಲಾಜಿ, ಖಾಜಾ ಹುಸೇನ್ ತಂದೆ ಜಿಲಾನಿ ಸಾಬ್, ವಿಜಯಲಕ್ಷ್ಮೀ ತಂದೆ ಮಂಜುನಾಥ, ಬಿ.ಎಡ್ ವಿಭಾಗದಲ್ಲಿ ಭೀರಲಿಂಗಪ್ಪ ತಂದೆ ಸಣ್ಣ ಮಲ್ಲಪ್ಪ, ಬಿ.ಇ ವಿಭಾಗದಲ್ಲಿ ವಿರೇಶ್ ತಂದೆ ಬೀರಪ್ಪ ಎಂ.ಎಸ್ಸಿ ವಿಭಾಗದಲ್ಲಿ ರಾಘವೇಂದ್ರ ತಂದೆ ಬುಗ್ಗಪ್ಪ ಅವರಿಗೆ ವಿವಿಧ ಗಣ್ಯರಿಂದ ಸನ್ಮಾನಿಸಿ, ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಶಶಿಕಾಂತ ಶಿವಪೂರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ವಾಯ್.ವಾಲ್ಮೀಕಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಂದ್ರ ಜಲ್ದಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂಗಮೇಶ, ಉಪನ್ಯಾಸಕರಾಗಿ ಮುಕ್ಕನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂರ್ಪಣೆಯನ್ನು ದಂಡಪ್ಪ ಬಿರಾದರ ಅವರು ಮಾಡಿದರು.