ಜನಸೇವೆ ವೈದ್ಯರ ಗುರಿಯಾಗಲಿ : ಖನಿಜಾ ಫಾತಿಮಾ
ಕಲಬುರಗಿ,ಅ.1-ವೈದ್ಯಕೀಯ ರಂಗದ ಗಮನಾರ್ಹ ಬದಲಾವಣೆಯ ಸಂದರ್ಭದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಾಗಿದೆ. ವೈದ್ಯ ಜನಮುಖಿಯಾಗಿ ಕರ್ತವ್ಯ ನಿರ್ವಹಿಸುವ ಗುಣ ಹೆಚ್ಚಾಗಿದೆ ಎಂದು ಶಾಸಕಿ ಖನಿಜಾ ಫಾತಿಮಾ ಅಭಿಪ್ರಾಯಪಟ್ಟರು.
ಕಲಬುರಗಿಯ ವರ್ತುಲ ರಸ್ತೆಯ ಹಾಗರಗಾ ಕ್ರಾಸ್ ಸಮೀಪದಲ್ಲಿ ನೂತನವಾಗಿ ಆರಂಭಗೊಂಡ ಹರಿದಾಸ ಹೃದಯ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ಬಾಲಕರು ಮತ್ತು ಯುವಕರಲ್ಲೂ ಕೂಡ ಹೃದಯದ ತೊಂದರೆ ಕಾಣಿಸುತ್ತಿದ್ದು ಕಲ್ಬುರ್ಗಿಯಂತಹ ಕ್ಷಿಪ್ರ ಬೆಳೆಯುತ್ತಿರುವ ನಗರಕ್ಕೆ ಇಂತಹ ಆಸ್ಪತ್ರೆಗಳ ಅಗತ್ಯ ಹೆಚ್ಚಾಗಿದ್ದು ವೈದ್ಯರು ಜನಸೇವೆ ಮಾಡಲು ಉತ್ತಮ ಅವಕಾಶವಿದೆ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ ಮಾತನಾಡಿ ಡಾ.ಅರುಣ್ ಕುಮಾರ್ ಹರಿದಾಸ್ ಅಂತಹ ತಜ್ಞ ವೈದ್ಯರು ನಗರದಲ್ಲಿ ಲಭ್ಯ ವಿರುವುದು ರೋಗಿಗಳಿಗೆ ಒಂದು ಆಶಾಕಿರಣವಾಗಿದೆ. ಈ ಆಸ್ಪತ್ರೆಯ ಸದುಪಯೋಗವನ್ನು ಪಡೆದು ಸ್ವಾಸ್ಥ್ಯ ಬದುಕನ್ನು ಕಳೆಯಲು ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ್, ಕಲಬುರ್ಗಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಜರ್ ಅಲಂ ಖಾನ್, ಯುವ ಮುಖಂಡರಾದ ಫರಾಜುಲ್ ಇಸ್ಲಾಂ ಉಪಸ್ಥಿತರಿದ್ದು ಶುಭ ಹಾರೈಸಿದರು.
ಹರಿದಾಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಅರುಣ್ ಕುಮಾರ್ ಹರಿದಾಸ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ಎಲ್ಲ ತರದ ಚಿಕಿತ್ಸೆಗಳನ್ನು ನೀಡುವ ಅತ್ಯಾಧುನಿಕ ಪರೀಕ್ಷೆ, ಶಸ್ತ್ರಕ್ರಿಯೆ ವಿಭಾಗ ಹಾಗೂ ವೈದ್ಯರ ತಂಡದಿಂದ ಹರಿದಾಸ ಹೃದಯ ಆಸ್ಪತ್ರೆ ಜನ ಸೇವೆಗೆ ಸಜ್ಜಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.