ಆ.೧೯; ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ

ಪುತ್ತೂರು; ಸರ್ಕಾರದ ೫ ಗ್ಯಾರಂಟಿ ಯೋಜನೆಗಳನ್ನು ಶೇ.೧೦೦ ಅನುಷ್ಟಾನ ಮಾಡುವ ಹಿನ್ನಲೆಯಲ್ಲಿ ತಾಲೂಕಿಗೊಂದು ಸಮಿತಿ ನೇಮಕ ಮಾಡಲಾಗಿದ್ದು, ಸಮಿತಿಗೆ ಅಧ್ಯಕ್ಷರು ಸೇರಿದಂತೆ ೧೫ ಮಂದಿ ಸದಸ್ಯರ ಈ ತಂಡ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದ ಅರ್ಹ ಜನತೆಗೆ ಮತ್ತೆ ಯೋಜನೆಯಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ ಅವರು ತಿಳಿಸಿದರು.
ಶನಿವಾರ ಅವರು ಕಚೇರಿ ಉದ್ಘಾಟನೆಯ ಪೂರ್ವಬಾವಿಯಾಗಿ ಪುತ್ತೂರು ತಾಪಂ ತರಬೇತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಆ.೧೯ರಂದು ಪುತ್ತೂರು ತಾಪಂ ಕಚೇರಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟನೆಯಾಗಲಿದೆ. ಈ ಕಚೇರಿಯನ್ನು ಶಾಸಕ ಅಶೋಕ್‌ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಸಹಿತ ವಿವಿಧ ಮುಖಂಡರು ಭಾಗಿಯಾಗಲಿದ್ದಾರೆ. ಹಾಗಾಗಿ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಯೋಜನೆಗಳನ್ನು ಪಡೆದುಕೊಂಡವರ, ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಬಾಕಿ ಉಳಿದವರು ಮತ್ತು ಈ ಯೋಜನೆಗಳಿಗೆ ಸರ್ಕಾರ ಬಳಕೆ ಮಾಡಿದ ಹಣದ ವಿವರಗಳನ್ನು ಸ್ಪಷ್ಟವಾಗಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಗಳಲ್ಲಿ ಆಗಿರುವ ಸಾಧನೆ ಹಾಗೂ ಮುಂದೆ ಆಗಬೇಕಾಗಿರುವ ಗುರಿ ಬಗ್ಗೆ ಯೋಚನೆ ಮಾಡುವ ಮೂಲಕ ಅಧಿಕಾರಿ ವರ್ಗ ಮತ್ತು ಈ ಯೋಜನೆಯ ಅನುಷ್ಠಾನ ಸಮಿತಿ ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಸಮಿತಿ ಸದಸ್ಯರ ಘೋಷಣೆ;
ತಾಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಕಾರ್ಯದರ್ಶಿಯಾಗಿರುವ ನವೀನ್‌ಕುಮಾರ್ ಭಂಡಾರಿ ಮಾತನಾಡಿ, ಈ ಸಮಿತಿಯಲ್ಲಿ ಅಧ್ಯಕ್ಷರನ್ನು ಹೊರತು ಪಡಿಸಿ ೧೪ ಮಂದಿ ಸದಸ್ಯರ ನೇಮಕವಾಗಿದೆ. ಶಿವನಾಥ ರೈ ಸರ್ವೆ, ಸಂತೋಷ್ ಭಂಡಾರಿ ಸಿಎಚ್ ಒಳಮೊಗ್ರು, ಸೇಸಪ್ಪ ನೆಕ್ಕಿಲು ಹಿರೇಬಂಡಾಡಿ, ತಾರಾನಾಥ ನುಳಿಯಾಲು ನಿಡ್ಪಳ್ಳಿ, ಮಹಮ್ಮದ್ ಫಾರೂಕ್ ಪೆರ್ನೆ, ಬಬಿತಾ ಅಳಿಕೆ, ವಿಜಯಲಕ್ಷ್ಮಿ ಕೋಡಿಂಬಾಡಿ, ಎಡ್ವರ್ಡ್ ಮೈಕಲ್ ಡಿ’ಸೋಜ ಅಮ್ಚಿನಡ್ಕ, ಅಶೋಕ್ ಪೂಜಾರಿ ಬೊಳ್ಳಾಡಿ,  ಹುಸೈನ್ ವಿಟ್ಲ, ಧೀರಜ್ ಗೌಡ ಕೊಡಿಪ್ಪಾಡಿ, ವಿಶ್ವಜಿತ್ ಅಮ್ಮುಂಜೆ ಕುರಿಯ, ಶೀನಪ್ಪ ಪೂಜಾರಿ ಪಡ್ನೂರು ಮತ್ತು ಆಸ್ಮಾ ಉಮರ್ ಕೆದಂಬಾಡಿ ಸದಸ್ಯರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.  ಈ ಸಮಿತಿ ತಿಂಗಳಲ್ಲಿ ಎರಡು ಬಾರಿ ಸಭೆ ನಡೆಸಬೇಕಿದ್ದು, ಗ್ಯಾರಂಟಿ ಯೋಜನೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿದೆ ಎಂದವರು ತಿಳಿಸಿದರು.