ಅನ್ನದಾನೇಶ್ವರ ಶಾಖಾಮಠದಲ್ಲಿ ಶ್ರೀಗಳ ಪುಣ್ಯಾರಾಧನೆ ; ಸಾಧಕರಿಗೆ ಪ್ರಶಸ್ತಿ ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.17:  ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಮಹಾತಪಸ್ವಿ ಲಿಂ. ಶ್ರೀ ಗುರು ಅನ್ನದಾನ ಮಹಾ ಶಿವಯೋಗಿಗಳವರ 47ನೇ ಪುಣ್ಯಾರಾಧನೆ ಹಾಗೂ ಕಾಯಕಯೋಗಿ ತ್ರಿವಿಧ ದಾಸೋಹಿ ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ತೃತೀಯ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಅಥಣಿ ವೀರಣ್ಣ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಆ. 18ರಂದು ಬೆಳಿಗ್ಗೆ 10.30 ಅನ್ನದಾನೇಶ್ವರ ಮಠದ ಆವರಣದಲ್ಲಿ  272ನೇ ಶಿವಾನುಭವ ಸಂಪದ ಹಾಗೂ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದರು.ಯು ಪಿ ಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 101ನೇ ರಾಂಕ್ ಳಿಸಿದ ಕು. ಸೌಭಾಗ್ಯ ಶರಣಯ್ಯ ಬೀಳಗಿ ಮಠ ಹಾಗೂ ಅಥಣಿ ಪಿ ಯು ಕಾಲೇಜಿನ ವಿದ್ಯಾರ್ಥಿನಿ ರಾಜ್ಯಕ್ಕೆ 9ನೇ ಸ್ಥಾನ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಕು. ರಮ್ಯಾ.ಎಸ್. ಆರ್. ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದು, ನಾಡು ನುಡಿಗೆ ಸೇವೆ ಸಲ್ಲಿಸಿದ ಲೆಕ್ಕ ಪರಿಶೋಧಕ ಮುಂಡಾಸದ ವೀರೇಂದ್ರರಿಗೆ “ಗಣಕ ಶ್ರೇಷ್ಠ”,ದೇವರ ಮನೆ ಶಿವಕುಮಾರ್ ಗೆ “ಕಾಯಕಯೋಗಿ”, ಅಥಣಿ ಪಿ ಜಿ ಸೆಂಟರ್‌ನ ಡಾ.ಕೆ. ಷಣ್ಮುಖ ಇವರಿಗೆ “ಕಾಯಕ ರತ್ನ,” ಮಹಾಂತೇಶ್ ಒಣ ರೊಟ್ಟಿ ಇವರಿಗೆ “ಕಾಯಕ ಸೌರಭ”, ಪ್ರಜಾವಾಣಿಯ ಚೀಫ್ ಬ್ಯೂರೋ  ಸಿದ್ದಯ್ಯ ಹಿರೇಮಠ ಹಾಗೂ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್ ಇವರಿಗೆ “ಪತ್ರಿಕೋದ್ಯಮ ಸಿರಿ,” ಬಾಡ ಕ್ರಾಸ್ ನ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ ಇವರಿಗೆ “ಕಾಯಕಜೀವಿ”, ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೆ ಇತ್ತೀಚೆಗೆ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ವಿಜೇತರಾದ ಅವರನ್ನು ಸನ್ಮಾನಿಸಲಾಗುವುದು ಎಂದರು.ಹಾಲಕೆರೆ ಜಗದ್ಗುರು ಶ್ರೀಮ. ನಿ.ಪ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಆವರಗೊಳ್ಳದ ಶ್ರೀ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದು, ಅಥಣಿ ಎಸ್ ವೀರಣ್ಣನವರು ಅಧ್ಯಕ್ಷತೆ ವಹಿಸುವವರು. ದಾವಣಗೆರೆ ವಿವಿಯ ಪರೀಕ್ಷಾಂಗ ವಿಭಾಗದ ನಿಕಟಪೂರ್ವ ಕುಲ ಸಚಿವ ಡಾ. ಕೆ. ಶಿವಶಂಕರ್ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಎ. ಹೆಚ್. ಶಿವಯೋಗಿಸ್ವಾಮಿ, ದಿನೇಶ್ ಶೆಟ್ಟಿ ಯವರು ಆಗಮಿಸುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್. ಅಡಿವೆಪ್ಪ, ಉಪಾಧ್ಯಕ್ಷ ಅಮರಯ್ಯ ಗುರುವಿನ ಮಠ, ಎನ್. ಶಿವಾನಂದಪ್ಪ, ಇಂದಿನ ಸುದ್ದಿ ಸಂಪಾದಕ ವೀರಪ್ಪ ಎಂ.ಭಾವಿ, ನಾಗರಾಜ್ ಯರಗಲ್ ಮತ್ತಿತರರು ಉಪಸ್ಥಿತರಿದ್ದರು.