ಅ.3 ರಿಂದ ಕೆ.ಹೆಚ್.ಬಿ ಗ್ರೀನ್ ಪಾರ್ಕನಲ್ಲಿ ವೈಭವದ ನವರಾತ್ರಿ ಉತ್ಸವ
ಕಲಬುರಗಿ:ಅ.1: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿರುವ ದಕ್ಷಿಣ ಮುಖಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಾಂಸ್ಕøತಿಕ ವೈಭವ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ.
ಅ. 3ರಂದು ಸಾಯಂಕಾಲ ಸಾಂಸ್ಕೃತಿಕ ದಸರಾಗೆ ದೇವಿಯ ಮೂರ್ತಿಯನ್ನು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ವೈಭವದ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ಅವತಾರಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ದಿಧಾತ್ರಿ ಅವತಾರಗಳಲ್ಲಿ ದೇವಿಯನ್ನು ಅಲಂಕರಿಸಿ ಪ್ರತಿನಿತ್ಯ ಪೂಜೆಯನ್ನು ನೆರವೇರಿಸಲಾಗುತ್ತದೆ.
ಬಡಾವಣೆಯ ಮಹಿಳೆಯರು ದೇವಿಯ ರೂಪಗಳಿಗೆ ಅನುಗುಣವಾಗಿ ನವದುರ್ಗಿಗೆ ಪ್ರಿಯವಾದ ಒಂಬತ್ತು ಬಣ್ಣದ ಸೀರೆಯನ್ನುಟ್ಟು ದಾಂಡಿಯಾ ನೃತ್ಯ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನದ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಗಣ್ಯರು, ಮಠಾದೀಶರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಸರಾ ಉತ್ಸವದಲ್ಲಿ ಸಮಸ್ತ ಸದ್ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆಯಬೇಕೆಂದು ಬಡಾವಣೆಯ ಅಧ್ಯಕ್ಷ ಸಂಜೀವಕುಮಾರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದರು.