ಅಭಿವೃದ್ಧಿಗೆ ಬದ್ಧ ಜನಸೇವೆಗೆ ಸದಾ ಸಿದ್ಧ : ಡಾ.ಶೈಲೇಂದ್ರ ಬೆಲ್ದಾಳೆ
ಬೀದರ :ಅ.1: ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರ 50ನೇ ಜನ್ಮ ದಿನವನ್ನು ಸೋಮವಾರ ವಿವಿಧ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜನ್ಮ ದಿನದ ಹಿನ್ನೆಲೆಯಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹಳ್ಳಿಖೇಡ್ ಹತ್ತಿರದ ಸೀಮಿ ನಾಗನಾಥ ಮಂದಿರ, ಚಾಳಕಾಪುರದ ಹನುಮಾನ ಮಂದಿರದಲ್ಲಿ,ಸಿದ್ಧಾರೂಢ ಮಠದಲ್ಲಿ ಪತ್ನಿ ಡಾ.ನೀತಾ ಮಗ ಕಿರಣ್ ಸಮೇತ ಕುಟುಂಬದವರೊಂದಿಗೆ ಪೂಜೆ ಸಲ್ಲಿಸಿದರು. ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಣೆ, ಹಣ್ಣು-ಹಂಪಲ ವಿತರಣೆ, ಅನ್ನ ದಾಸೋಹ ಇನ್ನಿತರೆ ಸೇವಾ ಚಟುವಟಿಕೆ ಅಭಿಮಾನಿ ಬಳಗದಿಂದ ನಡೆದವು. ಅನೇಕ ಪೂಜ್ಯರು ಡಾ.ಬೆಲ್ದಾಳೆ ಅವರಿಗೆ ಆಶೀರ್ವದಿಸಿದರು.
ಜನಪ್ರತಿನಿಧಿಗಳು, ಗಣ್ಯರು, ಪಕ್ಷದ ಮುಖಂಡರು, ವಿವಿಧ ಸಮಾಜದ ಪ್ರಮುಖರು, ಸಂಘ-ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು ಸೇರಿದಂತೆ ಸಹಸ್ರಾರು ಜನರು ಗೌರವಿಸಿ, ಶುಭ ಹಾರೈಸಿದರು. ಬೆಳಗ್ಗೆಯಿಂದ ರಾತ್ರಿವರೆಗೆ ಪ್ರತಾಪನಗರದ ನಿವಾಸಕ್ಕೆ ಅನೇಕರು ಆಗಮಿಸಿ ಶುಭಕೋರಿದರು. ಹೀಗಾಗಿ ದಿನವಿಡೀ ಸುವರ್ಣ ಜನ್ಮೋತ್ಸವ ಸಂಭ್ರಮ ಮನೆ ಮಾಡಿತ್ತು.
ಸಂಜೆ ಬೆಲ್ದಾಳೆ ಫಂಕ್ಶನ್ ಹಾಲ್ ನಲ್ಲಿ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಸುವರ್ಣ ಸಂಭ್ರಮದ ಜನ್ಮೋತ್ಸವ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಡಾ.ಬೆಲ್ದಾಳೆ ಅವರು, ಜನರ ಸೇವೆ ಧ್ಯೇಯದಿಂದ ರಾಜಕಾರಣಕ್ಕೆ ಬಂದಿದ್ದೇನೆ. ಎರಡು ದಶಕದ ರಾಜಕೀಯ ಜೀವನದಲ್ಲಿ ಅನೇಕ ಏಳು-ಬೀಳುಗಳು ಕಂಡಿದ್ದೇನೆ. ಮೂರನೇ ಬಾರಿಗೆ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಬದ್ಧ ಹಾಗೂ ಜನರ ಸೇವೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.
ಇಂದು ಎಲ್ಲರ ಪ್ರೀತಿ, ಆತ್ಮೀಯತೆ, ಅಕ್ಕರೆಯ ಸನ್ಮಾನ, ಅಭಿಮಾನದ ಗೌರವ ಕಂಡು ನಾನು ಪುಳಕಿತನಾಗಿದ್ದೇನೆ. ಅಭಿಮಾನಿಗಳು ಬಹಳ ಖುಷಿಯಿಂದ ನಾನಾ ಸಾಮಾಜಿಕ ಕಾರ್ಯಕ್ರಮ ನಡೆಸಿದ್ದಾರೆ. ಎಲ್ಲೆಡೆ ದೊಡ್ಡ ಪ್ರಮಾಣದ ಕಟೌಟ್ ಹಾಕಿ ಸಂಭ್ರಮಿಸಿದ್ದಾರೆ. ನನ್ನ ಮೇಲಿಟ್ಟ ಪ್ರೀತಿ, ಗೌರವಕ್ಕೆ ಋಣಿಯಾಗಿದ್ದೇನೆ. ಬೇಡ ಎಂದರೂ ಇಷ್ಟೊಂದು ವಿಶಿಷ್ಠವಾಗಿ 50ನೇ ಜನ್ಮ ದಿನ ಆಚರಿಸಿದ್ದು, ಈ ದಿನ ನನ್ನ ಜೀವನದ ಅವಿಸ್ಮರಣೀಯ ದಿನ ಎನಿಸಿದೆ. ಇದಕ್ಕಾಗಿ ಎಲ್ಲರಿಗೂ ಅನಂತ ಕೋಟಿ ಪ್ರಣಾಮಗಳು ಸಲ್ಲಿಸುತ್ತೇನೆ. ಎಲ್ಲರ ಆಶೀರ್ವಾದ ಹೀಗೆಯೇ ಇರಲಿ ಎಂದು ಕೋರಿದರು.
ಜೀವನದಲ್ಲಿ ಏರುಪೇರು, ಏಳು-ಬೀಳು ಸಾಮಾನ್ಯ. ಕಷ್ಟ-ಸುಖ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಇವು ಎಲ್ಲರಿಗೂ ಬಂದೇ ಬರುತ್ತವೆ. ನಾವೆಲ್ಲರೂ ಇದನ್ನು ಜೊತೆಯಾಗಿ ತೆಗೆದುಕೊಂಡು ಹೋಗಬೇಕು. ಕಷ್ಟ ಬಂದಾಗ ಕುಗ್ಗದೆ, ಸುಖವಿದ್ದಾಗ ಹಿಗ್ಗದೆ ಸಾಗಬೇಕು. ನನ್ನ ರಾಜಕೀಯ ಹಾಗೂ ಸಾರ್ವಜನಿಕ ಬದುಕಿನಲ್ಲಿ ಅನೇಕ ಏಳು-ಬೀಳು ಕಂಡಿದ್ದೇನೆ. ಆದರೆ ತಂದೆ-ತಾಯಿ ಆಶೀರ್ವಾದ, ದೇವರ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದ, ನಿಮ್ಮೆಲ್ಲರ ಆಶೀರ್ವಾದದಿಂದ ಎಲ್ಲವೂ ದಾಟಿ ಬಂದಿರುವೆ. ಜನರ ಸೇವೆ ಮಾಡುವ ಸಂಕಲ್ಪವೇ ನನಗೆ ದೊಡ್ಡ ಶಕ್ತಿ ನೀಡಿದೆ ಎಂದು
ಹೇಳಿದರು.
ನನ್ನ ಎರಡು ದಶಕದ ರಾಜಕೀಯ ಜೀವನದಲ್ಲಿ ಎಂಥದ್ದೇ ಪರಿಸ್ಥಿತಿ ಬಂದರೂ ಆತ್ಮವಿಶ್ವಾಸದಿಂದ, ಒಳ್ಳೆಯ ಗುರಿಯಿಂದ ಎದುರಿಸಿದ್ದರಿಂದ ಇಂದು ನಿಮ್ಮೆಲ್ಲರ ಮುಂದೆ ಶಾಸಕನಾಗಿ ನಿಂತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಶಕ್ತಿ, ಆಶೀರ್ವಾದವೇ ಕಾರಣ. ಸಮಾಜಕ್ಕೆ ಒಳ್ಳೆಯದು ಮಾಡಬೇಕು, ಜನರ ಸೇವೆ ಮಾಡಬೇಕು ಎಂಬ ಧ್ಯೇಯ ನನ್ನದು. ರಾಜಕೀಯ ಹಾದಿ ಅಷ್ಟೇನೂ ಸುಗಮವಾಗಿಲ್ಲ. ಆದರೂ ಜನತೆ ಕೊಟ್ಟ ಸಾಥ್ ನಿಂದ ರಾಜಕೀಯದ ರಥ ಒಂದು ಹಂತಕ್ಕೆ ಬಂದು ನಿಂತಿದೆ. ಎಲ್ಲರ ಆಶೀರ್ವಾದ, ಸಹಕಾರ, ಮಾರ್ಗದರ್ಶನ ನನಗೆ ರಾಜಕೀಯದಲ್ಲಿ ಸ್ಥಾನಮಾನ, ನೆಲೆ ಕಲ್ಪಿಸಿದೆ ಎಂದು ಹೇಳಿದರು.
2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ನಿರಾಸೆಯಾಗದೆ ಜನರ ಜೋತೆ ಇದ್ದು . ನನಗೆ ನನ್ನ ಕ್ಷೇತ್ರದ ಜನರ ಮೇಲೆ ಭರಪೂರ ನಂಬಿಕೆ, ವಿಶ್ವಾಸ ಇತ್ತು. 2023ರಲ್ಲಿ ನನ್ನ ಕೈಹಿಡಿದು ಮೊದಲ ಬಾರಿಗೆ ವಿಧಾನಸಭೆಗೆ ಕಳಿಸಿದರು. ನನ್ನ ಕ್ಷೇತ್ರದ ಎಲ್ಲ ಜನರಿಗೆ ಚಿರ ಋಣಿಯಾಗಿದ್ದೇನೆ. ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ. ಕುರ್ಚಿ ಸಿಗುತ್ತೆ, ಹೋಗುತ್ತೆ. ಇದು ಚಕ್ರದಂತೆ ಓಡುತ್ತಲೇ ಇರುತ್ತದೆ. ಆದರೆ ಅಧಿಕಾರ ಸಿಕ್ಕಾಗ ನಾವು ಮಾಡುವ ಒಳ್ಳೆಯ ಕೆಲಸ ಸದಾ ಜನಮಾನಸದಲ್ಲಿ ಉಳಿಯುತ್ತವೆ. ಜನರ ಸೇವೆ ನಮ್ಮ ಧ್ಯೇಯವಾದರೆ ಖಂಡಿತ ಜನರು ನಮ್ಮ ಕೈ ಬಿಡಲ್ಲ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಹೇಳಿದರು.
ವ್ಯಕ್ತಿ ಯಾವತ್ತೂ ದೊಡ್ಡವಲ್ಲ. ಅವನ ವ್ಯಕ್ತಿತ್ವ ದೊಡ್ಡದು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಜನರ ಮಧ್ಯೆ ನಾವು ಕೆಲಸ ಮಾಡಬೇಕು. ಉತ್ತಮ ವ್ಯಕ್ತಿತ್ವ ಹೊಂದಿ ರಾಜಕಾರಣ ಮಾಡುತ್ತ,ಜನರ ಸೇವೆ ಮಾಡುವ ಸಂಕಲ್ಪ ನಾವೆಲ್ಲ ಮಾಡಬೇಕಾಗಿದೆ. ಸರ್ಕಾರ ಯಾವುದೇ ಇರಲಿ, ಪಕ್ಷ ಯಾವುದೇ ಇರಲಿ ಉತ್ತಮ ವ್ಯಕ್ತಿತ್ವದ ಜೊತೆಗೆ ಸಮಾಜದ, ಸರ್ವರ ಅಭಿವೃದ್ಧಿ ಚಿಂತನೆ ನಮ್ಮದಾಗಿರಬೇಕು. ಇದರಿಂದ ನಮಗೂ, ಸಮಾಜಕ್ಕೂ ಒಳ್ಳೆಯದಾಗುತ್ತದೆ. ಜನರಿಗಾಗಿ ನನ್ನ ಮನೆ ಬಾಗಿಲು ಸದಾ ಖುಲ್ಲಾ ಇದೆ. ಮಾಡಿದ್ದು ಅಲ್ಪವಿದೆ. ಮುಂದೆ ಮಾಡಬೇಕಾಗಿರುವುದು ಇನ್ನೂ ಬಹಳ ಇದೆ ಎಂದು ನುಡಿದರು.