ಡಿ.ದೇವರಾಜ ಅರಸು ಪ್ರಶಸ್ತಿ ಪುರಸ್ಕøತ ಹಿನ್ನೆಲೆ:ಎಸ್.ಕೆ.ಕಾಂತಾಗೆ ಸರ್ಕಾರದಿಂದ ಅಧಿಕೃತ ಆಹ್ವಾನ
ಕಲಬುರಗಿ:ಆ.15:ಮಾಜಿ ಸಚಿವ ಎಸ್.ಕೆ.ಕಾಂತಾ ಅವರಿಗೆ ರಾಜ್ಯ ಸರ್ಕಾರವು 2024-25ನೇ ಸಾಲಿನ ರಾಜ್ಯ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಿ ಬುಧವಾರ ಸರ್ಕಾರಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಬಿ.ಸಿ.ಎಂ ಅಧಿಕಾರಿ ಪ್ರಭು ದೊರೆ ಅವರು ಕಲಬುರಗಿಯಲ್ಲಿನ ಎಸ್.ಕೆ.ಕಾಂತಾ ಅವರ ಮನೆಗೆ ಭೇಟಿ ನೀಡಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿದರು.
ಆಗಸ್ಟ್ 20 ರಂದು ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್.ಕೆ.ಕಾಂತಾ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುವರು.
ಡಿ.ದೇವರಾಜ ಅರಸು ಅವರ ತತ್ವ-ಸಿದ್ದಾಂತ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ಅನುμÁ್ಠನಕ್ಕೆ ತರಲು ಶ್ರಮಿಸುವವರಿಗೆ ಪ್ರತಿ ವರ್ಷ 5 ಲಕ್ಷ ರೂ. ಮೊತ್ತ ಮತ್ತು ಪ್ರಶಸ್ತಿ ಪತ್ರ ಒಳಗೊಂಡ ಈ ಪ್ರತಿಷ್ಟಿತ ಪ್ರಶಸ್ತಿ ರಾಜ್ಯ ಸರ್ಕಾರ ಕೊಡಮಾಡುತ್ತಿದೆ. ಈ ಬಾರಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ನೇತೃತ್ವದ ಆಯ್ಕೆ ಸಮಿತಿಯು ಎಸ್.ಕೆ.ಕಾಂತಾ ಅವರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಈ ಸಂದರ್ಭದಲ್ಲಿ ಕಚೇರಿ ಅಧೀಕ್ಷಕ ಮಹ್ಮದ್ ಆರೀಫ್, ಸಿಬ್ಬಂದಿ ವಿಲಾಸ್ ಕುಮಾರ ಇದ್ದರು.