ಶ್ರೀಗಂಧದ ತುಂಡುಗಳ ಅಕ್ರಮ ಮಾರಾಟ : ಮೂವರ ಬಂಧನ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ. 14: ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಶಿವಮೊಗ್ಗ ತುಂಗಾನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ನಡೆದಿದೆ.ಶಿವಮೊಗ್ಗ ಜೆಪಿ ನಗರದ ನಿವಾಸಿ ಇಮ್ದಾದ್ ಖಾನ್ (42), ಆರ್.ಎಂ.ಎಲ್ ನಗರದ ಸಿದ್ಧಿಕ್ ಬಾಷಾ ಯಾನೆ ಸಿದ್ದು (30) ಮತ್ತು ಇಂದಿರಾನಗರದ ಫೈರೋಜ್ ಖಾನ್ ಯಾನೆ ಗಿಡ್ಡು (34) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ .ಆರೋಪಿಗಳಿಂದ 58 ಸಾವಿರ ರೂ. ಮೌಲ್ಯದ 14. 5 ಕೆಜಿ ತೂಕದ ಶ್ರೀಗಂಧದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಲ್ಟೋ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.. ರಾತ್ರಿ ಆರೋಪಿಗಳು ಉಂಬ್ಳೆಬೈಲು ರಸ್ತೆಯ ದರ್ಗಾದ ಸಮೀಪ ಕಾರಿನಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಕುರಿತಂತೆ ಪೊಲೀಸರಿಗೆ ಖಚಿತ ವರ್ತಮಾನ ಲಭಿಸಿತ್ತು. ಇದರ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನ ಹಾಗೂ ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಮೇಲ್ವಿಚಾರಣೆಯಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಶಿವಪ್ರಸಾದ್, ಸಿದ್ದಪ್ಪ, ಸಿಬ್ಬಂದಿಗಳಾದ ಹೆಚ್.ಸಿ. ಕಿರಣ್ ಮೋರೆ, ಅರುಣ್ ಕುಮಾರ್, ಪಿಸಿಗಳಾದ ಹರೀಶ್ ನಾಯ್ಕ್, ನಾಗಪ್ಪ, ಲಂಕೇಶ್, ಹರೀಶ್, ಜಯಪ್ಪ, ರಮೇಶ್ ರವರು ಈ ಕಾರ್ಯಾಚರಣೆ ನಡೆಸಿದ್ದಾರೆ.