ಗ್ರಂಥಾಲಯ ನವೀಕರಣಕ್ಕೆ ಇನ್ಪೋಸಿಸ್‍ದಿಂದ ನೆರವು:ಸುಧಾಮೂರ್ತಿ
ತಾಳಿಕೋಟೆ:ಆ.13: ಪಟ್ಟಣದಲ್ಲಿರುವ ಸಾರ್ವಜನಿಕ ಶಾಖಾ ಗ್ರಂಥಾಲಯದ ಕಟ್ಟಡದ ಜೊತೆಗೆ ಅಗತ್ಯವಿರುವ ಎಲ್ಲ ನೆರವನ್ನು ಇನ್ಪೋಸಿಸ್ ಸಂಸ್ಥೆಯಡಿ ಒದಗಿಸಿ ಓದುಗರರಿಗೆ ಅನುಕೂಲ ಮಾಡಿಕೊಡುವದಾಗಿ ಇನ್ಪೋಸಿಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀಮತಿ ಸುಧಾ ನಾರಾಯಣಮೂರ್ತಿ ಅವರು ತಿಳಿಸಿದರು.
ಸೋಮವಾರರಂದು ಪಟ್ಟಣದ ಸಾರ್ವಜನಿಕ ಶಾಖಾ ಗ್ರಂಥಾಲಯಕ್ಕೆ ಬೆಟ್ಟಿ ನೀಡಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತದ ಗ್ರಂಥಾಲಯ ವಿಜ್ಞಾನಿ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಸ್ಥಳೀಯ ಗ್ರಂಥಾಲಯದ ಗ್ರಂಥಪಾಲಕ ಕೃಷ್ಣಾಜಿ ಕುಲಕರ್ಣಿ ಅವರಿಗೆ ಕಟ್ಟಡದ ನವೀಕರಣಕ್ಕೆ ಬೇಕಿರುವ ಸೌಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೇ ಈ ಗ್ರಂಥಾಲಯಕ್ಕೆ ಅವಶ್ಯವಿರುವ ಹೊಸ ಎರಡು ಅಂತಸ್ಥಿನ ಕಟ್ಟಡವನ್ನು ಕಟ್ಟಿಸಿಕೊಡುತ್ತೇವೆ ಅದರ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಅಲ್ಲದೇ ಕಂಪ್ಯೂಟರ್‍ಗಳನ್ನು ಮತ್ತು ಅಗತ್ಯ ಪುಸ್ತಕಗಳನ್ನು ಒದಗಿಸಿ ಓದುಗರರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿಕೊಡುತ್ತೇವೆಂದು ತಿಳಿಸಿದರು.
ಈ ಸಮಯದಲ್ಲಿ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ಬಿಆರ್‍ಸಿ ರಾಜು ವಿಜಾಪೂರ, ಮುನ್ನಾ ಅತ್ತಾರ, ರಾಜು ಪಾಟೀಲ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ನಾಗರಾಜ ಪತ್ತಾರ, ಹಾಗೂ ಸಾರ್ವಜನಿಕರು, ಓದುಗರರು ಉಪಸ್ಥಿತರಿದ್ದರು.