ಮನುಷ್ಯನ ಆರೋಗ್ಯಕ್ಕೆ ದೇವಾಲಯಗಳಿಗೆ ಭೇಟಿ ಕೊಡಿ
ಬೆಂಗಳೂರು, ಆ. ೧೩- ಮನುಷ್ಯನಿಗೆ ಆರೋಗ್ಯ ಹಾಗೂ ನೆಮ್ಮದಿ ಬೇಕೆಂದರೆ ದೇವಾಲಯಗಳಿಗೆ ಹೋಗಬೇಕು ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಸೋಮವಂಶದ ಸಹಸ್ರ ಅರ್ಜುನ ಕ್ಷತ್ರಿಯ ಸಮಾಜ ವತಿಯಿಂದ ನಗರದ ಕಿಲಾರಿ ರಸ್ತೆಯಲ್ಲಿ ಏರ್ಪಡಿಸಿದ್ದ್ದ ಗಂಗಮ್ಮ ಮತ್ತು ಅಂಬಾಭವಾನಿ ದೇವಿಯ ರಜತ ಮಹೋತ್ಸವ ಹಾಗೂ ದೇವಾಲಯದ ವಿಮಾನ ಗೋಪುರ, ಮುಖಮಂಟಪ ಮತ್ತು ದೇವಿಯ ಪುನರ್ ಪ್ರತಿಷ್ಠಾನ ಮಹೋತ್ಸವದ ಸಾನ್ನಿದ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯ ಇಂದು ಬಯಸ್ಸಿದ್ದನ್ನೆಲ್ಲ ಕೊಳ್ಳುವ ಶಕ್ತಿ ಹೊಂದಿದ್ದಾನೆ. ಆದರೆ ಆರೋಗ್ಯ ಮತ್ತು ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಇದನ್ನು ಪಡೆಯಲು ಹುಟ್ಟು ಮತ್ತು ಸಾವು ಎರಡೂ ಇಲ್ಲದ ಸ್ಥಳವಾದ ದೇವಾಲಯದಲ್ಲಿ ಮಾತ್ರ ಸಾಧ್ಯ. ಹಾಗಾಗಿ ಜನರು ದೇವಾಲಯಗಳಿಗೆ ಹೋಗುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗಂಗಮ್ಮ ದೇವಿ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದಿರುವುದು ಸಂತೋಷದ ವಿಚಾರ. ಈ ಬಡಾವಣೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ
ಕಾರ್ಯಗಳು ಆಗಬೇಕಿದ್ದು ಅದಕ್ಕಾಗಿ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತರ ನೇತೃತ್ವದಲ್ಲಿ ದೇವಾಲಯದ ಧಾರ್ಮಿಕ ಕೈಂಕರ್ಯಗಳು ನಡೆಯಿತು. ಸೋಮವಂಶದ ಸಹಸ್ರ ಅರ್ಜುನ ಕ್ಷತ್ರಿಯ ಸಮಾಜ
ಬಾಂಧವರು ಪಾಲ್ಗೊಂಡಿದ್ದರು.
ನಗರದ ಕಿಲಾರಿ ರಸ್ತೆಯಲ್ಲಿ ಶ್ರೀ ಗಂಗಮ್ಮ ಮತ್ತು ಅಂಬಾಭವಾನಿ ದೇವಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಸಚಿವ ದಿನೇಶ್ ಗುಂಡೂರಾವ್, ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಮತ್ತಿತರರು ಇದ್ದಾರೆ.