ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ ಪ್ರದಾನಜನಮನ ರಂಜಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬೀದರ, ಆ.12-ಬೀದರ ನಗರದ ಪೂಜ್ಯ ಡಾ. ಚೆನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ ಕರ್ನಾಟಕ 50ರ ಸಂಭ್ರಮ, ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ, ರಾಜ್ಯ ಮಟ್ಟದ ಸಾಂಸ್ಕೃತಿಕ ಸಂಗೀತ, ಕನ್ನಡ ಹಾಡುಗಳ ಗಾಯನ, ಸಾಹಿತ್ಯ ಗೋಷ್ಠಿ ಮತ್ತು ರಾಜ್ಯ ಮಟ್ಟದ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.  
ಈ ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಚಂದ್ರಕಾಂತ ಅವರು ಕನ್ನಡ ಗೀತೆಗಳ ಮತ್ತು ವಚನ ಗಾಯನವನ್ನು ಸಾದರಪಡಿಸಿದರು. ಕನ್ನಡದ ಭಾಷೆಯ ಇಂಪನ್ನು ಮತ್ತು ಮಹತ್ವವನ್ನು ಸಾರುವ “ಹರಿದಾಳ ತುಂಗೆಯಾಗಿ ಮೆರೆದಾಳ ಕಾವೇರಿ……” ಗೀತೆಯನ್ನು ಪರಮೇಶ್ವರಿ ರಾಗದಲ್ಲಿ ಮತ್ತು ರಾಷ್ಟ್ರಕವಿ ಕುವೆಂಪು ವಿರಚಿತ “ಕನ್ನಡ ಎನೆ ಕುಣಿದಾಡುವುದೆನ್ನೆದೆ…..” ಗೀತೆಯನ್ನು ಭೀಮಪಲಾಸಿ ರಾಗದಲ್ಲಿ ಹಾಡಿದರು. ನಂತರ ಮಹಾ ಮಾನವತಾವಾದಿ ಬಸವಣ್ಣವರ “ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ….” ವಚನವನ್ನು ಅಹೀರ ಭೈರವ ರಾಗದಲ್ಲಿ ಹಾಡಿದರು. 
ಖ್ಯಾತ ಕಲಾವಿದ ಮತ್ತು ಸಂಗೀತ ಶಿಕ್ಷಕ ಶಿವಕುಮಾರ ಪಾಂಚಾಳ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಕಲಬುರಗಿಯ ರವಿಕುಮಾರ ಎಸ್.ಸಿಂಘೆ ತಮ್ಮ ಮಿಮಿಕ್ರಿಯಿಂದ ಎಲ್ಲರೂ ನಗುವಿನ ಹೊಳೆಯಲ್ಲಿ ತೇಲಾಡುವಂತೆ ಮಾಡಿದರು. ಕಲಬುರಗಿಯ ಕು. ವರ್ಷಿಣಿಯ  ಭರತ ನಾಟ್ಯ ಪ್ರದರ್ಶನ; ಭಾಲ್ಕಿ ತಾಲೂಕಿನ ಆಶಾ ಮತ್ತು ತಂಡದವರ ಲಂಬಾಣಿ ನೃತ್ಯ; ಮಂಡ್ಯದ ಗುಂಡಪ್ಪ ಕಟ್ಟಿ ಅವರ ಸುಗಮ ಸಂಗೀತ; ವಸಂತ ಬಾರಡ್ಕ ಕಾಸರಗೋಡು, ಹುಬ್ಬಳ್ಳಿಯ ಮೋಹನಕುಮಾರ, ಜಿ.ಎಂ. ಕೃಷ್ಣಪ್ಪ, ಹರೀಶ್ ಚಕ್ರವರ್ತಿ ಅವರ ಕನ್ನಡ ಹಾಡುಗಳು; ದೇವಿದಾಸ ಚಿಮಕೋಡ ಅವರ ಜನಪದ ಗಾಯನ; ಅಶ್ವಜೀತ ದಂಡಿನ, ದಿಲೀಪ ದಂಡಿನ ಅವರ ಕ್ರಾಂತಿಗೀತೆ; ಡಾ. ಸುಜಾತಾ ಹೊಸಮನಿ, ಅಜೀತ ನೇಳಗೆ, ರವಿದಾಸ ಕಾಂಬ್ಳೆ, ಅವಿನಾಶ ಸೋನಿ, ಡಾ. ಸುನೀತಾ ಪಿ. ಸೂರ್ಯವಂಶಿ, ಶಿವರಾಜ ಮಿತ್ರ, ದಿಲೀಪಕುಮಾರ ಮೋಘ ಅವರ ಕವನ ವಾಚನ ಪ್ರೇಕ್ಷರನ್ನು ರಂಜಿಸಿದವು.
ಹಾರಕೂಡ ಮಠದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತ, ಮಹಿಮಾ ಮೊಗವೀರ, ರಾಹುಲ ಮಿಶ್ರಾ ಬಿಹಾರ, ಭೀಮ ನೀಲಕಂಠರಾವ ಹಂಗರಗಿ, ಸಾದಿಕ್ ಅಹ್ಮದ್ ಕೋಲಾರ, ಮೌನೇಶ ಕರಕಿಹಳ್ಳಿ, ಡಾ. ಮಲ್ಲಯ್ಯ ಅತ್ತನೂರ, ಬಕ್ಕಪ್ಪ ದಂಡಿನ, ವಸಂತ ಬಾರಡ್ಕ ಕಾಸರಗೋಡು, ಅಶೋಕಕುಮಾರ ಎನ್.ಕಲ್ಯಾಣಿ, ಭೀಮರೆಡ್ಡಿ ಸಿಂಧನಕೇರಾ, ಮಾನಶಪ್ಪ ಚಿಕ್ಕಬುದೂರ, ಅಂಬಿಕಾ ಕಲಬುರಗಿ, ಡಾ. ಶ್ರೀನಿವಾಸ ಹೊಸಪೇಟೆ, ಸಂತೋಷ ಚೇಟ್ಟೆ, ಡಾ. ಗವಿಸಿದ್ದಪ್ಪ ಪಾಟೀಲ್ ಮುಂತಾದವರಿಗೆ ಕರ್ನಾಟಕ ಸಾಂಸ್ಕೃತಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕನ್ನಡ ಮರೆತರೆ ತಾಯಿ ಮರೆತಂತೆ ಎಂದರು. ಬುದ್ಧ ಬಸವ ಮತ್ತು ಅಂಬೇಡ್ಕರರ ತತ್ವಾದರ್ಶಗಳು ಕೇವಲ ಭಾಷಣಕ್ಕೆ ಸೀಮಿತಗೊಳ್ಳದೆ ಅವುಗಳನ್ನು ಕಾರ್ಯಾಚರಣೆಗೆ ತರುವುದು ಬಹಳ ಮುಖ್ಯವೆಂದರು. ಬಾಬಾ ಜ್ಞಾನಸಾಗರ ಭಂತೆಜೀ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ಭಾಗದ ಕಲಾವಿದರು ದಕ್ಷಿಣ ಭಾಗದ ಕಲಾವಿದರಂತೆ ಮತ್ತು ಕಲಾ ತಂಡಗಳಂತೆ ಉಡುಗೆ-ತೊಡುಗೆ, ವೇಷ-ಭೂಷಣಗಳಿಗೆ ಆದ್ಯತೆ ನೀಡಬೇಕು. ನಮ್ಮ ಭಾಗದ ಕಲಾವಿದರ ಕುಂದುಕೊರತೆಗಳಿಗೆ ಸದಾ ಸ್ಪಂದಿಸುವುದಾಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಓ.ಎಂ.ಮಚ್ಚೆ, ಶಶಿಕುಮಾರ ಪಾಟೀಲ್, ಅಜೀಜ್ ಖಾನ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಂ.ಎಸ್.ಮನೋಹರ, ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತ ಪಾಟೀಲ್, ಜಿಲ್ಲಾಧ್ಯಕ್ಷ ಮುಕೇಶ ಶಾಹಗಂಜ್, ಬಸವರಾಜ ಜಡಗೆ, ಕರ್ನಾಟಕ ಪ್ರಜಾಶಕ್ತಿ ಸಮಿತಿ ವಿಭಾಗೀಯ ಅಧ್ಯಕ್ಷ ಪ್ರೇಮಕುಮಾರ ಕಾಂಬ್ಳೆ, ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅವಿನಾಶ ಬುದೇರಕರ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಸಾಹಿತಿ ಡಾ. ಕೆ.ಎಸ್. ಬಂಧು ಸಿದ್ದೇಶ್ವರ ಅಧ್ಯಕ್ಷತೆ ವಹಿಸಿದ್ದರು. 
ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನೂ ಸ್ವಾಗತಿಸಿದರು. ಅವಿನಾಶ ಪ್ರೇಮ ಪಕಾಲವಾಡಾ, ಡಾ. ಸುನೀತಾ ಬಿಕ್ಲೆ ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕನ್ನಡಿಗರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2023-24ನೇ ಸಾಲಿನ ಸಂಘ ಸಂಸ್ಥೆಗಳ ಧನಸಹಾಯಕ್ಕಾಗಿ ಸಾಮಾನ್ಯ ಯೋಜನೆಯಡಿ ಈ ಕಾರ್ಯಕ್ರಮ ಸಂಘಟಿಸಿತ್ತು.