ಸರ್ಕಾರಿ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಪ್ರಯತ್ನ ಶ್ಲಾಘನೀಯ
ಕೋಲಾರ.ಅ.೧-ಸರ್ಕಾರಿ ಶಾಲೆಗಳ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯ ಸರ್ಕಾರ ಅಜೀಂಪ್ರೇಮ್‌ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸುತ್ತಿದ್ದು, ಇದರ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಸಾಧನೆ ಮಾಡಿ ಎಂದು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಕರೆ ನೀಡಿದರು.
ಕೆಜಿಎಫ್ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಭಾಗಿತ್ವದಲ್ಲಿ ವಾರದ ಎಲ್ಲಾ ೬ ಶಾಲಾ ದಿನಗಳಲ್ಲಿಯೂ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸುವ ಕಾಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳೊಂದಿಗೆ ನೆಲದಲ್ಲಿ ಕುಳಿತು ಊಟ ಸವಿದರು. ನಂತರ ಮಾತನಾಡಿ ಹಿಂದೆ ವಾರದಲ್ಲಿ ೦೨ ದಿನ ಮಾತ್ರ ಮಕ್ಕಳಿಗೆ ಮೊಟ್ಟೆಯನ್ನು ರಾಜ್ಯ ಸರ್ಕಾರ ನೀಡುತ್ತಿತ್ತು ಆದರೆ ಇದೀಗ ಅಜೀಂ ಪ್ರೇಮ್‌ಜಿ ಫೌಂಡೇಷನ್ ಉಳಿದ ೪ ಶಾಲಾ ದಿನಗಳಲ್ಲೂ ಮೊಟ್ಟೆ ವಿತರಣೆಗೆ ಉದಾರ ರೂಪದಲ್ಲಿ ೧೫೦೦ ಕೋಟಿ ರೂ ಅನುದಾನ ನೀಡಿದ್ದು, ಇದೀಗ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಈ ಯೋಜನೆ ಜಾರಿಗೆ ಬಂದಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳ ೧ರಿಂದ ೧೦ನೇ ತರಗತಿ ಮಕ್ಕಳಿಗೆ ವಾರದ ಆರು ದಿನ ಮೊಟ್ಟೆ ವಿತರಿಸುತ್ತಿರುವುದರಿಂದ ಅವರ ಮಾನಸಿಕ, ದೈಹಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದ ಅವರು ಶಾಲೆಗಳ ದಾಖಲಾತಿ ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಿ ಎಂದು ತಿಳಿಸಿ, ಇಲ್ಲಿಗೆ ಬರುವುದು ಬಡ ಮಕ್ಕಳೇ ಅವರಿಗೆ ಅನ್ಯಾಯವಾಗದಂತೆ ಎಚ್ಚರವಹಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಮಕ್ಕಳಿಗೆ ಪಠ್ಯದ ಜತೆಗೆ ಅತಿ ಮುಖ್ಯವಾಗಿ ಸಂಸ್ಕಾರ ಕಲಿಸಿ ಎಂದು ಕೋರಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಇಂದು ದೇಶದ ಮಹಾನ್ ಸಾಧಕರಾಗಿದ್ದು, ಕೀಳಿರಿಮೆ ಬಿಟ್ಟು ಓದಿ ಉತ್ತಮ ಸಾಧಕರಾಗಿ ಎಂದು ಸಲಹೆ ನೀಡಿದರು.
ಎಸ್‌ಎಸ್‌ಎಲ್‌ಸಿ ಈ ಬಾರಿ ತಾಲ್ಲೂಕು ಉತ್ತಮ ಸಾಧನೆ ಮಾಡಲು ಶಿಕ್ಷಕರು ಮತ್ತು ಇಲಾಖೆ ಎಲ್ಲಾ ರೀತಿಯ ಪ್ರಯತ್ನ ನಡೆಸಿದೆ, ವಿಶೇಷ ತರಗತಿಗಳ ಮೂಲಕ ಮಕ್ಕಳ ಶೈಕ್ಷಣಿಕ ಬಲವರ್ಧನೆಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪ್ರವೀಣ್ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯುವರಾಜ್, ಶಾಲೆಯ ಉಪ ಪ್ರಾಂಶುಪಾಲ ದಿನೇಶ್, ಶಾಸಕರ ಆಪ್ತ ಸಹಾಯಕ ಸೋಮಶೇಖರ್, ನೌಕರರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಸುರೇಶ್, ಕೇಶವರೆಡ್ಡಿ, ಎಂ.ಶ್ರೀನಿವಾಸ್, ಆನಂದರೆಡ್ಡಿ, ಶಾಲೆಯ ಶಿಕ್ಷಕರಾದ ಅನುರಾಧ ಮುತಾಲಿಕ್, ಕವಿತಾ, ಕೋಮಲಾ, ಲೀಲಾವತಿ, ಮುಜಾಮಿಲ್, ಪ್ರೇಮವಾಣಿ, ಜೆ.ಕವಿತಾ ಮತ್ತಿತರರಿದ್ದರು.