ಗೃಹ ಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಹಣ : ಸಚಿವರ ಮಹತ್ವದ ಹೇಳಿಕೆ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ.೧೨: ಗೃಹ ಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಮಾಡಲಾಗಿದೆ. ಮೂರು ತಿಂಗಳ ಹಣವೂ ಫಲಾನುಭವಿಗಳಿಗೆ ಲಭ್ಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯಕ್ಕೆ  ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಗೃಹ ಲಕ್ಷ್ಮೀ ಯೋಜನೆಯಡಿ  ಪ್ರತಿ ತಿಂಗಳು ಸುಮಾರು 3 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ತಿಂಗಳು ಹಣ ಬಿಡಗಡೆಗೆ 15 ದಿನಗಳು ಬೇಕಾಗುತ್ತದೆ. ಬ್ಯಾಂಕ್ ಗಳಿಂದ ಫಲಾನುಭವಿಗಳಿಗೆ ಹಣ ತಲುಪಲು ಸಮಯ ಬೇಕಾಗುತ್ತದೆ ಎಂದರು.ಪ್ರತಿ ತಿಂಗಳು 15 ನೇ ದಿನಾಂಕದಂದು ಹಣ ಬಿಡುಗಡೆ ಮಾಡಿದರೆ, 28 ನೇ ದಿನಾಂಕದಂದು ತಲುಪುತ್ತದೆ. ಮೂರು ತಿಂಗಳ ಹಣವೂ ಬರುತ್ತದೆ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ ಸ್ಥಗಿತಗೊಳ್ಳುವುದಿಲ್ಲ. ನಿರಂತರವಾಗಿ ಮುಂದುವರಿಯಲಿದೆ . ಹೆಣ್ಣು ಮಕ್ಕಳಿಗೆ 18 ವರ್ಷ ಆದ ನಂತರ ವಿದ್ಯಾಭ್ಯಾಸಕ್ಕೆ ಬಳಕೆ ಮಾಡಬಹುದು. 21 ವರ್ಷಕ್ಕೆ ಹಣ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.ಸಚಿವ ಸಂಪುಟ ವಿಸ್ತರಣೆಯ ಯಾವುದೆ ಚರ್ಚೆಗಳು ನಡೆಯುತ್ತಿಲ್ಲ. ಆದರೆ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿದ್ದೆವೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.ಪ್ರಸ್ತುತ ವರ್ಷ ಉತ್ತಮ ಮಳೆಯಾಗಿದೆ. ಎಲ್ಲ ಡ್ಯಾಂಗಳು ಭರ್ತಿಯಾಗಿವೆ. ಹೊಸಪೇಟೆ ತುಂಗಭದ್ರಾ ಜಲಾಶಯದಲ್ಲಿ ಗೇಟ್ ವೊಂದು ಕೊಚ್ಚಿ ಹೋದ ಘಟನೆ ಕುರಿತಂತೆ, ಈಗಾಗಲೇ ರಾಜ್ಯ ಸರ್ಕಾರ ಆದ್ಯ ಗಮನಹರಿಸಿದೆ ಎಂದು ತಿಳಿಸಿದ್ದಾರೆ.