‘ನಮ್ಮ ಸ್ವಚ್ಚತೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ : ಡಿಡಿಪಿಐ ನಾಗೂರ
ವಿಜಯಪುರ,ಆ.11: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಂತವಾಗಿರುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸ್ವಾಸ್ಥ ಸುಂದರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಕರೆ ನೀಡಿದರು.
ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಮನಗೂಳಿ ಸರಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಮನಗೂಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮನಗೂಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮನಗೂಳಿ ಶ್ರೀ ಎಸ್.ಬಿ.ಪಾಟೀಲ ಸಂಯುಕ್ತ ಪ ಪೂ ಕಾಲೇಜು(ಪ್ರೌಢ ಶಾಲೆ ವಿಭಾಗ) ಹಾಗೂ ಮನಗೂಳಿ ಉರ್ದು ಸರಕಾರಿ ಪ್ರೌಡ ಶಾಲೆ ಇವರ ಸಹಯೋಗದಲ್ಲಿ ಮನಗೂಳಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡ ಸ್ವಚ್ಛತಾ ಜಾಗೃತಿ ಜಾಥಾಕ್ಕೆ ಮನಗೂಳಿಯ ಎಂಪಿಎಸ್, ಕೆಜಿಎಚ್ ಪಿಎಸ್ ಶಾಲಾ ಆವರಣದಲ್ಲಿ ಡ್ರಮ್ ವಾದ್ಯ ನುಡಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಜಾಗೃತಿ ಜಾಥಾವು ಮನಗೂಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಚ್ಚತೆಯ ಕುರಿತಾಗಿರುವ ನಮ್ಮ ಶಾಲೆ ನಾವು ಸ್ವಚ್ಚಗೊಳಿಸೋಣ, ನಮ್ಮ ಸ್ವಚ್ಚತೆ ನಮ್ಮ ಆರೋಗ್ಯ, ಪ್ರತಿ ಮನೆಗೆ ಶೌಚಾಲಯ ಹೊಂದೋಣ, ಸ್ವಚ್ಚತೆ ಹಾಗೂ ಶುಚಿತ್ವ – ಅಭಿವೃದ್ಧಿ-ಯಶಸ್ಸನ್ನು ನೀಡುತ್ತದೆ. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ. ಸ್ವಚ್ಛತೆ ಕಾಪಾಡಿ, ರೋಗಗಳಿಂದ ದೂರವಿರಿ.ಸ್ವಚ್ಛವಾದ ಸ್ಥಳವು ಸುರಕ್ಷಿತ ಸ್ಥಳವಾಗಿದೆ.ಸ್ವಚ್ಛ ಪರಿಸರ ಆರೋಗ್ಯಕರ ಜೀವನ. ಘೋಷಣೆಗಳನ್ನು ಕೂಗಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು.
ಎಂಪಿ.ಎಸ್, ಕೆಜಿಎಸ್, ಭೀಮನಗರ ಕೆಬಿಎಲ್ ಪಿಎಸ್ ಶಾಲೆ ಮನಗೂಳಿಯಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಕೈ ಶುಚಿತ್ವದ ವಿಧಾನ ತಿಳಿಸಿಕೊಡಲಾಯಿತು.
ಸ್ವಚ್ಚತಾ ಜಾಗೃತಿ ಜಾಥಾದಲ್ಲಿ ಬಸವನ ಬಾಗೇವಾಡಿ ಬಿ.ಆರ್.ಸಿ.ಓ, ಶಿಕ್ಷಣ ಸಂಯೋಜಕರು, ಬಿ.ಆರ್.ಪಿ. ಪ್ರೌಢÀ ಶಾಲೆಯ ಮುಖ್ಯ ಶಿಕ್ಷಕ ಹನಗಂಡಿ, ಸುವರ್ಣಾ ಅಳ್ಳಗಿ, ಮನಗೂಳಿಯ ಸಿ.ಅರ್.ಪಿ.ಗಳು, ಎಲ್ಲಾ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.