ಸ್ವಚ್ಛ ಭಾರತದ ಸಾಕಾರಕ್ಕೆ ಎಲ್ಲರ ಸಹಕಾರ ಅಗತ್ಯ
ಕಲಬುರಗಿ:ಸೆ.30: ಸ್ವಚ್ಛತೆ ಕೇವಲ ಸರ್ಕಾರ, ಪೌರ ಕಾರ್ಮಿಕರು, ಕೆಲವು ಸಂಘ-ಸಂಸ್ಥೆಗಳ ಕಾರ್ಯವಾಗದೆ ಸಾಮೂಹಿಕ ಜವಾಬ್ದಾರಿಯಾಗಿದೆ. ಮನೆ ಹಾಗೂ ಸುತ್ತ-ಮುತ್ತಲಿನ ಪರಿಸರದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬಯಲು ಶೌಚಾಲಯ ಎಂದಿಗೂ ಬೇಡ. ಪ್ಲಾಸಿಕ್‍ಗೆ ಪರ್ಯಾಯ ಬಳಕೆ ಮಾಡಬೇಕು. ಸ್ವಚ್ಛ ಭಾರತದ ಸಾಕಾರಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಗಂಗಾ ನಗರದಲ್ಲಿರುವ ‘ಶ್ರೀ ವಿವೇಕಾನಂದ ಪ್ರಾಥಮಿಕ ಮತ್ತು ಪ್ರೌಢಶಾಲೆ’ಯಲ್ಲಿ ‘ನೆಹರು ಯುವ ಕೇಂದ್ರ’ ಮತ್ತು ‘ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ’ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ಇವುಗಳ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಸೋಮವಾರ ಏರ್ಪಡಿಸಲಾಗಿದ್ದ ‘ಸ್ವಚ್ಛತೆಯೇ ಸೇವೆ’ ವಿಶೇಷ ಸರಣಿ ಕಾರ್ಯಕ್ರಮ-4ರಲ್ಲಿ ಸ್ವಚ್ಛತಾ ಪ್ರತಿಜ್ಞೆ ವಿಧಿ ಬೋಧಿಸಿ ಅವರು ಮಾತನಾಡಿದರು.
‘ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ’ ನಿಸರ್ಗ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಧೂಳಪ್ಪ ದ್ಯಾಮನಕರ್ ಮಾತನಾಡಿ, ಮಾನವನಿಗೆ ಬರುವ ಸಾಮಾನ್ಯ ಖಾಯಿಲೆಗಳಿಗೆ ಅನೈರ್ಮಲತೆ ಪ್ರಮುಖ ಕಾರಣವಾಗಿದೆ. ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಚತೆ ಕಾಪಾಡುವುದರಿಂದ ವ್ಯಕ್ತಿ ಆರೋಗ್ಯವಾಗುವುದರ ಜೊತೆಗೆ ಸ್ವಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ಯುವಕರು ಶ್ರಮವಹಿಸಲು ತಿಳಿಸಿದರು.
ಶಿಕ್ಷಕ ಶಂಕರ ಕೆ.ಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಗುಡಬಾ, ಶಿಕ್ಷಕಿಯರಾದ ರಾಜೇಶ್ವರಿ ಡಾಂಗೆ, ರೂಪಾ ಎಸ್.ಚಂಗಟಿ, ಅರ್ಚನಾ ಕುಲಕರ್ಣಿ, ನಿಖಿತಾ ಎಸ್., ಮೌನಿಕಾ, ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಕಾವೇರಿ, ಪ್ರತಿಭಾ, ವಿಶಾಲಾಕ್ಷಿ, ಭಾಗ್ಯಶ್ರೀ, ಶೃತಿ, ಕಮಲಾ ಹಾಗೂ ವಿದ್ಯಾರ್ಥಿಗಳಿದ್ದರು.