ಗ್ಯಾರಂಟಿಗಳಿಗೆ ಪರಿಶಿಷ್ಟರ ಅನುದಾನ ಬಳಕೆ ಸರ್ಕಾರದ ನಿರ್ಧಾರಕ್ಕೆ ಡಿಎಚ್‌ಎಸ್ ಆಕ್ರೋಶ
ಕೋಲಾರ,ಆ,೧೦- ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಹಣವನ್ನು ಸರಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ನಿರ್ಧಾರವನ್ನು ಖಂಡಿಸಿ ಶುಕ್ರವಾರ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ನಗರದ ತಹಶಿಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು,
ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಮುಖಂಡ ಕೆ.ವಿ ಮಂಜುನಾಥ್ ಮಾತನಾಡಿ ರಾಜ್ಯದಲ್ಲಿ ದಲಿತರ ಅಭಿವೃದ್ಧಿಗಾಗಿ ಬಳಕೆಯಾಗಬೇಕಾದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಸುಮಾರು ಎರಡೂವರೆ ಲಕ್ಷ ಕೋಟಿಗೂ ಹೆಚ್ಚು ಅನುದಾನವನ್ನು ಬೇರೆ ಕಾರ್ಯಕ್ರಮಗಳಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಇಷ್ಟೂ ಹಣವನ್ನು ಅರ್ಹ ದಲಿತರಿಗೆ ತಲುಪದೆ ಸರಕಾರ ಗ್ಯಾರಂಟಿಗಳ ಉದ್ದೇಶಕ್ಕೆ ಬಳಕೆಯಾಗಿದೆ. ಅದನ್ನು ತಡೆಗಟ್ಟಲೆಂದೇ ರಾಜ್ಯದ ಕಾಂಗ್ರೆಸ್‌ಸರ್ಕಾರವು ಕಳೆದ ವರ್ಷ ಸಂಬಂಧಿತ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ ಹೇಳಿಕೊಳ್ಳಲು ದಲಿತ ಪರವಾದ ಸರಕಾರ ಆದರೆ ದಲಿತರ ಕೋಟ್ಯಾಂತರ ಹಣವನ್ನು ಅನ್ಯ ಯೋಜನೆಗಳಿಗೆ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಅಧಿಕಾರ ನಡೆಸಿರುವ ಪ್ರತಿಯೊಂದು ಸರ್ಕಾರವು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡಿದೆ ಪ್ರತಿ ಹಂತದಲ್ಲೂ ದಲಿತರನ್ನು ವಂಚಿಸಿಕೊಂಡು ಬಂದಿದ್ದಾರೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದನ್ನು ಕೂಡಲೇ ತಡೆಯಬೇಕು ಸರಕಾರವೇ ಜಾರಿಗೆ ತಂದಿದ್ದ ದಲಿತರ ಅಭಿವೃದ್ಧಿ ಉದ್ದೇಶದ ನೀತಿಗಳನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉಲ್ಲಂಘಿಸಿದ್ದಾರೆ ಎಂದು ಸರಕಾರದ ನಡೆಯ ವಿರುದ್ದ ಟೀಕಿಸಿದರು.
ಡಿಹೆಚ್‌ಎಸ್ ಸಂಘಟನೆಯ ಹಿರಿಯ ಮುಖಂಡ ಹನುಮಂತರಾಯ್ ಮಾತನಾಡಿ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವಂತಹ ವಂಚನೆ ಕೆಲಸವನ್ನು ಮಾಡಿದ್ದಾರೆ ಇದು ರಾಜ್ಯದ ದಲಿತರಿಗೆ ಮಾಡಿದ ದ್ರೋಹವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆ ಉದ್ದೇಶಿಸಿ ಕೆಜಿಎಫ್ ಪಿಚ್ವಿಕಣ್ಣು ಮಾತನಾಡಿ ರಾಜ್ಯದಲ್ಲಿ ದಲಿತರ ಮೀಸಲಾತಿಯಲ್ಲಿ ಗೆದ್ದ ಸಚಿವರು ಮತ್ತು ಶಾಸಕರು ಸರ್ಕಾರದ ಈ ತೀರ್ಮಾನಕ್ಕೆ ಮೌನವಹಿಸಿರುವುದು ವಿಷಾದನೀಯವಾಗಿದೆ ಸರ್ಕಾರವು ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳುವುದನ್ನು ತಕ್ಷಣವೇ ತಡೆಹಿಡಿಯಬೇಕು. ೧೦ ವರ್ಷಗಳಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ಎಷ್ಟು ಹಣ ನೀಡಲಾಗಿತ್ತು ಮತ್ತು ಅದರಲ್ಲಿ ಈ ಯೋಜನೆಗಳಿಗೇ ಎಷ್ಟು ಹಣ ಬಳಕೆಯಾಗಿದೆ ಎಂಬುದನ್ನು ಪರಿಶೀಲಿಸಲು ಸಮಿತಿ ರಚಿಸಬೇಕು ಹಾಗೂ ಮೌಲ್ಯಮಾಪನ ನಡೆಸಬೇಕು ಎಂದು ಆಗ್ರಹಿಸಿದರು
ನೇತೃತ್ವವನ್ನು ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಪಿ.ಶ್ರೀನಿವಾಸ್, ಅಶೋಕ್, ಗಂಗಮ್ಮ, ವಿ.ನಾರಾಯಣರೆಡ್ಡಿ, ಯಲ್ಲಪ್ಪ, ವೇಣುಗೋಪಾಲ್, ವಿಜಯಕೃಷ್ಣ, ಭೀಮರಾಜ್, ನವೀನ್ ಕುಮಾರ್, ಮಂಜುಳ, ಟಿ.ಹೆಚ್ ಅಂಜಲಪ್ಪ, ನಾರಾಯಣಪ್ಪ, ಭಾಸ್ಕರನ್, ಮುಂತಾದವರು ಇದ್ದರು