ದೊಡ್ಡರಾಯಪೇಟೆ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ. 5- ತಾಲ್ಲೂಕಿನ ದೊಡ್ಡರಾಯಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ. ಸೋಮಣ್ಣ, ಉಪಾಧ್ಯಕ್ಷ ರಾಗಿ ಎಚ್.ಎಸ್. ಮಹದೇವಯ್ಯ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮದ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷ ರ ಆಯ್ಕೆ ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಕ್ಕೆ ಡಿ. ಸೋಮಣ್ಣ, ಉಪಾಧ್ಯಕ್ಷ ಸ್ಥಾನ ಕ್ಕೆ ಎಚ್.ಎಸ್. ಮಹದೇವಯ್ಯ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಅಧಿಕಾರಿ ನಾಗೇಶ್ ಅವರು ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧಿಕೃತವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಡಿ.ಸೋಮಣ್ಣ ಅಧಿಕಾರ ವಹಿಸಿಕೊಂಡು ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಅವಿರೋಧವಾಗಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಂಘವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ನಿರ್ದೇಶಕರು ಒಗ್ಗಟ್ಟಿನಿಂದ ಸುಸ್ತಿದಾರ ರೈತರನ್ನು ಭೇಟಿ ಮಾಡಿ, ಸಾಲ ಮರು ಪಾವತಿಸಿ, ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ಕೊಡಿಸುವ ಮೂಲಕ ರೈತರನ್ನು ಆರ್ಥಿಕ ಅಭಿವೃದ್ದಿಪಡಿಸುವ ಜೊತೆಗೆ ಸಂಘವನ್ನು ಮುನ್ನಡೆಸೋಣ ಎಂದರು.
ಸಹಕಾರ ಸಂಘದ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಸಂಘದ ಸದಸ್ಯರು ನೂತನ ಆಡಳಿತ ಮಂಡಲಿಯ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಆದೇ ರೀತಿ ಆಡಳಿತಯ ಎಲ್ಲಾ ನಿರ್ದೇಶಕರು ಸಹ ಪಕ್ಷಾತೀತ, ಜಾತ್ಯಾತೀತವಾಗಿ, ಒಮ್ಮತದಿಂದ ತೀರ್ಮಾನ ಮಾಡಿ, ಅವಿರೋಧವಾಗಿ ಆಯ್ಕೆಗೆ ಸಹಕಾರ ನೀಡಿದ್ದೀರಿ. ನಿಮ್ಮೆಲ್ಲರ ಶ್ರಮ ಇನ್ನು ಹೆಚ್ಚಿನ ಸಂಘದ ಬೆಳೆವಣಿಗೆಗೆ ಹಾಕಬೇಕಾಗಿದೆ. ದೊಡ್ಡರಾಯಪೇಟೆ ಸಹಕಾರ ಸಂಘ ಹಳೆ ಹಾಗು ಉತ್ತಮ ಹೆಸರು ಹೊಂದಿರುವ ಸಂಘವಾಗಿದೆ. ಸಂಘದ ವ್ಯಾಪ್ತಿಗೆ ಬರುವ ಏಳು ಗ್ರಾಮಗಳ ರೈತರನ್ನು ಸಂಘದ ಸದಸ್ಯರನ್ನಾಗಿ ಮಾಡುವ ಜೊತೆಗೆ ಅವರಿಗೆ ಸಾಲ ಸೌಲಭ್ಯವನ್ನು ಕೊಡಿಸಲು ಮುಂದಾಗಬೇಕು. ಸಂಘದ ಆರ್ಥಿಕ ಬಲ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ನೂತನ ನಿರ್ದೇಶಕರಾದ ಪಾಪಣ್ಣ, ಆರ್.ಮಹದೇವಸ್ವಾಮಿ, ನಾಗರಾಜು, ಪುಟ್ಟಮ್ಮ, ದ್ರಾಕ್ಷಾಯಿಣಿ, ಜಿ. ಸೋಮಣ್ಣ, ಹಂಡ್ರಕಳ್ಳಿ ಡೇರಿ ಮಹದೇವಪ್ಪ, ಮಹದೇವ, ಎಂಡಿಸಿಸಿ ಮೇಲ್ವಿಚಾರಕ ಡಿ. ಮಂಜು, ಸಂಘದ ಸಿಇಓ ಮಹದೇವಯ್ಯ, ಡೇರಿ ಮಾಜಿ ಅಧ್ಯಕ್ಷ ಶಿವರುದ್ರಸ್ವಾಮಿ, ಮುಖಂಡರಾದ ಮಹದೇವಸ್ವಾಮಿ, ರಾಜು, ಮಹೇಶ್. ಶಿವಾನಂದಸ್ವಾಮಿ, ಪ್ರದೀಪ್, ಹಂಡ್ರಕಳ್ಳಿ ಯೋಗೇಶ್ ಮೊದಲಾದವರು ಇದ್ದರು.