ಅ.2 ರಿಂದ ಸರ್ವೋದಯ ಪಾದಯಾತ್ರೆ
ಕಲಬುರಗಿ,ಸೆ.30-ಮಹಾತ್ಮಾ ಗಾಂಧಿಜೀಯವರ ಜಯಂತಿ ವಿಶ್ವ ಅಹಿಂಸೆಯ ದಿನ ಮತ್ತು ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ 109 ನೇ ಜನ್ಮದಿನೋತ್ಸವದ ಪ್ರಯುಕ್ತ ಮಾಧವ ರಥೋತ್ಸವ ಭಾವಕ್ಯ ಸರ್ವಧರ್ಮ ಸಮನ್ವಯ ಸತ್ಸಂಗ ಸರ್ವೋದಯ ಪಾದಯಾತ್ರೆಯು ಅ.2 ರಂದು ಮಹಾತ್ಮ ಗಾಂಧಿ ಜಯಂತಿಯಿಂದ ನ.2 ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಜನ್ಮೋತ್ಸವದವರೆಗೆ ಹುಬ್ಬಳ್ಳಿಯಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠದವರೆಗೆ ಹಮ್ಮಿಕೊಳ್ಳಲಾಗಿದೆ.
ಅ.2 ರಂದು ಹುಬ್ಬಳ್ಳಿಯ ವಿದ್ಯಾ ನಗರದಲ್ಲಿರುವ ಸಮರ್ಥ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ಬೆಳಿಗ್ಗೆ ಹತ್ತು ಗಂಟೆಗೆ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು ತಮ್ಮ ಅಮೃತ ಹಸ್ತದಿಂದ ಮಹಾತ್ಮ ಗಾಂಧಿಜೀ ಹಾಗೂ ಸಮರ್ಥ ಸದ್ಗುರು ಮಾಧವಾ ನಂದಪ್ರಭೂಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಪಾದಯಾತ್ರೆಗೆ ಚಾಲನೆ ನೀಡುವರು . ಅ. 2 ರಂದು ಹೊರಟ ಪಾದಯಾತ್ರೆಯು ತಿಂಗಳ ಪಯರ್ಂತ ಕರ್ನಾಟಕ ಮಹಾರಾಷ್ಟ್ರದೆಲ್ಲೆಡೆ ಸಂಚರಿಸಿ ನ.1 ರಂದು ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ತಲುಪಿದ ನಂತರ ನ.2 ರಂದು ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಹಾಗೂ ವಿವಿಧೆಡೆಯಿಂದ ಆಗಮಿಸಿದ ಮಹಾತ್ಮರ ಸಮ್ಮುಖದಲ್ಲಿ ಭವ್ಯ ಮೆರವಣಿಗೆ ಹಾಗೂ ಮಾಧವಾನಂದ ಪ್ರಭೂಜಿಯವರ ತೊಟ್ಟಿಲೋತ್ಸವ ಕಾರ್ಯಕ್ರಮದೊಂದಿಗೆ ಮಂಗಲಗೊಳ್ಳುವದು.
ಮಾಧವಾನಂದ ಪ್ರಭೂಜಿಯವರು ಮಹಾತ್ಮ ಗಾಂಧಿಜೀಯವರ ಸತ್ಯವೆ ದೇವರೆಂದು ಸಾಕ್ಷಾತಕರಿಸಿಕೊಂಡು ಸತ್ಯ ಅಹಿಂಸೆಯ ಆಧಾರದಮೇಲೆ ದೇಶಕ್ಕೆ ಸ್ವರಾಜವನ್ನು ತಂದುಕೊಟ್ಟರಲ್ಲದೆ ದೇಶದ ಏಕತೆ ಸಮಗ್ರತೆಗಾಗಿ ಶ್ರಮಿಸಿದರು. ಇಂತಹ ಮಹಾ ಪುರುಷರ ಜನ್ಮೋತ್ಸವನ್ನು ಪ್ರತಿ ವರ್ಷ ದೇಶಾದ್ಯಂತ ಆಚರಿಸಲಾಗತ್ತದೆ. ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆದೇಶದಂತೆ ಈ ಪಾದಯಾತ್ರೆ ಹೊರಡುವದು ಈ ಪಾದಯಾತ್ರೆಯಲ್ಲಿ ಮಾಧವಾನಂದ ಪ್ರಭೂಜಿಯವರ ತತ್ವ ಆದರ್ಶಗಳಾದ ಸರ್ವ ಧರ್ಮ ಸಮನ್ವಯ. ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆ. ಸರ್ವೋದಯ.ಪಾನ ನಿಷೇಧ. ಸ್ವದೇಶಿ ವಸ್ತುಗಳು ಸ್ವದೇಶಿ ವಸ್ತ್ರಗಳನ್ನು ಬಳಸಲು ಜನಜಾಗ್ರತಿ, ವಿಶ್ವ ಶಾಂತಿ ಮುಂತಾದ ಮಹಾನ್ ವಿಚಾರಗಳನ್ನು ಊರೂರಿಗೆ ತಿಳಿಸುವದೆ ಈ ಪಾದಯಾತ್ರೆಯ ಉದ್ದೇಶವಾಗಿದೆ. ಈ ಪಾದಯಾತ್ರೆಯಲ್ಲಿ ಇಂಚಗೇರಿ ಸಂಪ್ರದಾಯದ ನಿಯಮದಂತೆ ನಿತ್ಯ ನೇಮ ಉಪಾಸನೆ ಭಜನೆ ಪುರಾಣ ಪ್ರವಚನ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರಗುವವು. ಈ ಪಾದಯಾತ್ರೆ ಹಾಗೂ ಜನ್ಮೋತ್ಸವದ ಕಾರ್ಯಕ್ರಮಗಳಲ್ಲಿ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗೋಪಾಲ ಮುರಗೋಡ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.