ಪಾಲಕರ ನಿರೀಕ್ಷೆ ಹುಸಿ ಮಾಡದಿರಿ
ಬೀದರ್:ಸೆ.30: ಮಕ್ಕಳು ಪಾಲಕರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ನಗರದ ಸಾಯಿ ಸ್ಫೂರ್ತಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಪಾಲಕರು ಮಾಡುವ ತ್ಯಾಗಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಮಕ್ಕಳು ತಮಗಿಂತ ಎತ್ತರಕ್ಕೆ ಬೆಳೆಯಬೇಕು ಎಂಬುದೇ ಅವರ ಆಸರೆಯಾಗಿರುತ್ತದೆ. ಹೀಗಾಗಿ ಅವರ ಅಪೇಕ್ಷೆಯನ್ನು ಈಡೇರಿಸುವುದು ಮಕ್ಕಳ ಕರ್ತವ್ಯವಾಗಿದೆ ಎಂದು ತಿಳಿಸಿದರು.
ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಚಂದ್ರಶೇಖರ ಬಿರಾದಾರ ಮಾತನಾಡಿ, ಶಿಷ್ಯನ ಸಾಧನೆಗೆ ಹೆಚ್ಚು ಖುಷಿ ಪಡುವವನೇ ಗುರು. ವಿದ್ಯಾರ್ಥಿಗಳು ಗುರು, ಹಿರಿಯರನ್ನು ಸದಾ ಗೌರವಿಸಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ, ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಸತ್ಯಮೂರ್ತಿ, ಪ್ರಮುಖರಾದ ಕಾಮಶೆಟ್ಟಿ ಚಿಕ್ಕಬಸೆ, ಶಿವಕುಮಾರ ಮಚಕೂರೆ, ಸಂತೋಷಕುಮಾರ ಮಂಗಳೂರೆ, ಗುರುನಾಥ ರಾಜಗೀರಾ, ವೀರೇಶ ಸ್ವಾಮಿ ಮತ್ತಿತರರು ಇದ್ದರು.
ಪ್ರೇಮಕುಮಾರ ಸ್ವಾಗತಿಸಿದರು. ನೀಲಾ ನಿರೂಪಿಸಿದರು. ಆಕಾಶ ವಂದಿಸಿದರು.