ಮೊಬೈಲ್, ಹಣ ದರೋಡೆ: ಐವರ ಬಂಧನ
ಕಲಬುರಗಿ,ಆ.7-ನಗರದ ಬಸವೇಶ್ವರ ಕಾಲೋನಿಯಲ್ಲಿ ಆಟೋದಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ತಡೆದು ಹಲ್ಲೆ ನಡೆಸಿ ಮೊಬೈಲ್ ಮತ್ತು ಹಣ ದೋಚಿದ್ದ ಐವರನ್ನು ಎಂ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ.
ಮಹ್ಮದ್ ಮುಸ್ತಾಫಾ ತಂದೆ ಇಕ್ಬಾಲ್ ಅಹ್ಮದ್ ಖುರೇಷಿ (21), ಸೈಯದ್ ಅರಬಾಜ್ ತಂದೆ ಸೈಯದ್ ಹುಸೇನ್ (21), ಮಿನಾಜ್ ತಂದೆ ಅಬ್ದುಲ್ ಸಲೀಮ್ ಪಟೇಲ್ (19), ಉಸಮಾ ಸಿದ್ದಕೀ ತಂದೆ ಮಹ್ಮದ್ ಸಲಾವುದ್ದೀನ್ (22) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನನ್ನು ಬಂಧಿಸಿ ಮೊಬೈಲ್, ಹಣ ಮತ್ತು ಕೃತ್ಯಕ್ಕೆ ಬಳಸಿದ 2 ಬೈಕ್, 2 ಚಾಕು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಳಂದ ಪಟ್ಟಣದ ಸುಲ್ತಾನಪುರಗಲ್ಲಿ ನಿವಾಸಿ ಸೋಮನಾಥ ಸಿದ್ದಣ್ಣ ತಡಕಲ್ (24) ಎಂಬುವವರು ನಗರದ ಬಸವೇಶ್ವರ ಕಾಲೋನಿಯಲ್ಲಿ ಆಟೋದಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಐವರು ಅವರನ್ನು ತಡೆದು ಹಲ್ಲೆ ನಡೆಸಿ ಮೊಬೈಲ್, ಹಣ ಸುಲಿಗೆ ಮಾಡಿದ್ದರು. ಈ ಸಂಬಂಧ ಅವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಈಶಾನ್ಯ ವಲಯ ಡಿಐಜಿಪಿ ಮತ್ತು ಪ್ರಭಾರ ಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ಕಲಬುರಗಿ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಎಂ.ಬಿ.ನಗರ ಪೊಲೀಸ್ ಠಾಣೆ ಪಿಐ ಶಿವಾನಂದ ಎಸ್.ವಾಲಿಕಾರ ಅವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಚನ್ನವೀರಪ್ಪಾ, ಕವಿತಾ ಗುತ್ತೇದಾರ, ಎ.ಎಸ್.ಐ ಬಸವರಾಜ ಗೋನಿ, ಸಿಬ್ಬಂದಿಗಳಾದ ಸಿದ್ದಣ್ಣ, ಭೀರಪ್ಪಾ, ಸಂತೋಷ, ಮಹೇಶ, ದಸ್ತಯ್ಯ, ಗುರುರಾಜ, ನಾಗರಾಜ, ಕಾಶಿರಾಯ, ಚನ್ನಬಸಯ್ಯ, ಸಿದ್ದಣ್ಣ ಮತ್ತು ಚನ್ನವೀರ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸುಲಿಗೆಕೋರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.