ಹಿರಿಯ ಹೋರಾಟಗಾರ ಭೀಮಶಿ ಕಲಾದಗಿ ಇನ್ನಿಲ್ಲ
ಸಂಜೆವಾಣಿ ವಾರ್ತೆ,
ವಿಜಯಪುರ, ಆ.೬:ವಿಜಯಪುರ ಜಿಲ್ಲೆಯ ಹಿರಿಯ ಹೋರಾಟಗಾರ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಪ್ರಗತಿಪರ ಸಂಘಟನೆಗಳ ವೇದಿಕೆಯ ಜಿಲ್ಲಾ ಅಧ್ಯಕ್ಷ ಭೀಮಶಿ ಹಣಮಂತ ಕಲಾದಗಿ (೮೭) ಸೋಮವಾರ ರಾತ್ರಿ ನಿಧನರಾದರು.
ಮೂಲತಃ ಇಂಡಿ ತಾಲೂಕಿನ ನಿಂಬಾಳ ಗ್ರಾಮದವರಾದ ಭೀಮಶಿ ಕಲಾದಗಿ ಅನೇಕ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಇಡೀ ಜೀವನವನ್ನು ಹೋರಾಟದಲ್ಲಿಯೇ ಕಳೆದ ಇವರು ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸೋಮವಾರ ರಾತ್ರಿ ೯-೪೦ ರ ಸುಮಾರಿಗೆ ಇಹ ಲೋಕ ತ್ಯಜಿಸಿದ್ದು, ಆ. ೬ ರಂದು ಸಂಜೆ ೪ ಕ್ಕೆ ಇಂಡಿ ತಾಲೂಕಿನ ನಿಂಬಾಳ ಗ್ರಾಮದ ತೋಟದ ವಸ್ತಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅದಕ್ಕೂ ಮುನ್ನ ಮಧ್ಯಾಹ್ನ ೨ ರವರೆಗೆ ವಿಜಯಪುರದ ಕಾಳಿಕಾ ನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಪತ್ನಿ ಹಾಗೂ ಅಪಾರ ಬಂಧುಬಳಗವಿದೆ.