ವಿಶ್ವ ರೇಬಿಸ್ ದಿನಾಚರಣೆ
ಬಾಗಲಕೋಟೆ,ಸೆ30: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಸಮೀಕ್ಷಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಗರದ ಕಾಲೇಜ್ ಆಫ್ ನರ್ಸಿಂಗ್‍ನ ಸಭಾಭವನದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ರೇಬೀಸ್ ಮಾರಣಾಂತಿಕವಾಗಿದ್ದು ನಿರ್ಲಕ್ಷ ವಹಿಸಬಾರದು. ಮೂರು ಹೆಜ್ಜೆಗಳನ್ನು ಅನುಸರಿಸಬೇಕು. ಈ ವರ್ಷದ ಘೋಷಣೆ ರೇಬೀಸ್ ಗಡಿಗಳನ್ನು ಮೀರಿ ಮುಂದುವರಿಯೋಣ ಎಂದರು.
ಜಿಲ್ಲಾ ಸಮೀಕ್ಷಾಧಿಕಾರಿ ಡಾ.ದಯಾನಂದ ಕರೆಣ್ಣವರ ಮಾತನಾಡಿ, ಫ್ರೆಂಚ್ ವೈದ್ಯ ವಿಜ್ಞಾನಿ ಲೂಯಿ ಪ್ಯಾಶ್ಚರ್ ರವರು ರೇಬೀಸ್ ಕಾಯಿಲೆಗೆ ಲಸಿಕೆ ಕಂಡು ಹಿಡಿದ್ದಾರೆ. ಅವರು 28 ಸೆಪ್ಟಂಬರ 1895 ರಂದು ಮರಣ ಹೊಂದಿದರು. ಅವರ ಸ್ಮರಣೆಗಾಗಿ ಪ್ರತಿ ವರ್ಷ ಸೆಪ್ಟಂಬರ 28 ರಂದು ಜಗತ್ತಿನಾದ್ಯಂತ ಶಾಲೆ ಕಾಲೇಜುಗಳಲ್ಲಿ ಮತ್ತು ಸಮುದಾಯದಲ್ಲಿ ರೇಬೀಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ 2030ಕ್ಕೆ ರೇಬೀಸ್ ರೋಗವನ್ನು ಶೂನ್ಯಗೊಳಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ವೆಂಕಟೇಶ ಸಂಕ್ರಿ ಮಾತನಾಡಿ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ರೇಬೀಸ್ ಲಕ್ಷಣಗಳ ಬಗ್ಗೆ ಮತ್ತು ನಿಯಂತ್ರಣ ಕ್ರಮ ಚಿಕಿತ್ಸೆ ಬಗ್ಗೆ ತಿಳಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರರ(ಪರಿಸರ) ಸತೀಶ ಖಜ್ಜಿಡೋಣಿ ಮಾತನಾಡಿ ನಗರ ಪ್ರದೇಶದಲ್ಲಿ ಬೀದಿ ನಾಯಿ ಮತ್ತು ಸಾಕು ನಾಯಿಗಳ ಬಗ್ಗೆ ನಗರ ಪರಿಸರ ಸ್ವಚ್ಛತೆ ಬಗ್ಗೆ ತಿಳಿಸಿದರು.
ಜಿಲ್ಲಾ ಸೋಂಕು ಶಾಸ್ತ್ರಜ್ಞರಾದ ಡಾ.ಸೀಮಾ ಹುದ್ದಾರ ಅವರು ರೇಬೀಸ್ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಸರಸ್ವತಿ ಮಾಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಲಾ ಶಿನ್ನೂರು, ಕಾಲೇಜ್ ಆಫ್ ನರ್ಸಿಂಗ್ ಪ್ರಾಚಾರ್ಯ ಡಾ.ಉತ್ತಲಭಾಷಾ ಧಂದರಗಿ, ಡಾ.ಸುರೇಶಗೌಡ ಪಾಟೀಲ ಸೇರಿದಂತೆ ಆಶಾ ಕಾರ್ಯಕರ್ತರು, ಕಾಲೇಜಿನ ಉಪನ್ಯಾಸಕರು, ಎಲ್ಲ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಪಿ.ನಾಯ್ಕರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.