ದೇವಾ ನಾರಾಯಣ ಎಂದರೆ ಸಾಕು ಸಕಲ ದುಃಖ ನಿವಾರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.05:- ಸಿದ್ದರು, ಪಾಮರರು, ಘೋರವಾದ ವ್ಯಾದಿ ಪೀಡಿತರಿಂದ ಹಿಡಿದು ಯಾರೇ ಆಗಲಿ ದೇವಾ ನಾರಾಯಣ ಎಂದರೆ ಸಾಕು ಎಲ್ಲಾ ತರಹದ ದುಃಖ ನಿವಾರಣೆಯಾಗಲಿದೆ ಎಂದು ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನುಡಿದರು.
ಭಾನುವಾರ ಬೆಳಿಗ್ಗೆ ಶತ ಚಂಡೀ ಯಾಗದ ಮಹಾ ಪೂರ್ಣಾಹುತಿಗೂ ಮುನ್ನ ಭಕ್ತರಿಗೆ ಶ್ರೀಗಳು ಆಶೀರ್ವಚನ ನೀಡಿದರು. ಪ್ರತಿದಿನ ದೇವ ನಾರಾಯಣ ಎಂಬ ಶಬ್ದ ನುಡಿದರೆ ಸಾಕು ಎಲ್ಲಾ ದುಃಖ ನಿವಾರಣೆ ಆಗಿ ಸಕಲ ಸುಖ ಪ್ರಾಪ್ತಿಯಾಗುತ್ತದೆ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.
ಭಗವಂತನ ನಾಮಾವನ್ನು ಸಂಗೀತದ ಜೊತೆ ಜೋಡಿಸಿ ಹಾಡಿದಾಗ ಬಹಳ ಆನಂದ ಸಿಗುತ್ತದೆ ಎಂದು ಹೇಳಿದ ಶ್ರೀಗಳು,ರಾಜುಪೌಲ್ ಮತ್ತು ಅವರ ವಿದ್ಯಾರ್ಥಿಗಳು, ಮಕ್ಕಳು ಹಾಡಿದ ಭಜನಾ ಶೈಲಿ ಅದ್ಭುತವಾಗಿತ್ತು ಎಂದು ಬಣ್ಣಿಸಿದರು.
ನಾರಾಯಣ ನಾರಾಯಣಿ ಎಂದರೆ ಇಬ್ಬರು ಒಂದೇ, ವಿಷ್ಣು ಸಹಸ್ರನಾಮವನ್ನು ಕೇಳುತ್ತಿದ್ದರೆ ಅಮಾವಾಸ್ಯೆ ಹುಣ್ಣಿಮೆಯಾಗಿ ಬಿಡುತ್ತದೆ ಹಾಗಾಗಿ ಎಲ್ಲರೂ ಭಕ್ತಿಯಿಂದ ವಿಷ್ಣು ಸಹಸ್ರನಾಮವನ್ನು ಕೇಳಬೇಕು ಎಂದು ಶ್ರೀದತ್ತ ವಿಜಯಾನಂದ ತೀರ್ಥ ಶ್ರೀಗಳು ಸಲಹೆ ನೀಡಿದರು.
ಖ್ಯಾತ ವಾಗ್ಮಿ ಮತ್ತು ಚಿಂತಕರಾದ ಅರಳು ಮಲ್ಲಿಗೆ ಪಾರ್ಥ ಸಾರಥಿ ಅವರು ವಿಷ್ಣು ಸಹಸ್ರನಾಮದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಈ ಕಲಿಯುಗದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ ಆಯಸ್ಸು, ಸುಖ ಪ್ರಾಪ್ತಿಗೆ ವಿಷ್ಣು ಸಹಸ್ರನಾಮ ಪಠಣೆ ಮುಖ್ಯ ಎಂದು ಸ್ವತಃ ಶ್ರೀದೇವಿಯೇ ಆದಿ ಗುರು ಶಂಕರಾಚಾರ್ಯರಿಗೆ ತಿಳಿಸಿದ್ದರು ಎಂದು ಹೇಳಿದರು.
ನಂತರ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡಿ ದೇವಿ ಆಲಯದಲ್ಲಿ ಅಮ್ಮನವರಿಗೆ ಫಲಸಂತರ್ಪಣೆ ಮಾಡಲಾಯಿತು. ಇದೇ ವೇಳೆ ಶ್ರೀ ದತ್ತ ಸ್ವಾಮಿಗೆ ತೈಲಾಭಿಷೇಕವನ್ನು ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಆನಂತರ ಸಿಂಹ ವಾಹಿನಿಯಾದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಶೀಗಳ ನೇತೃತ್ವದಲ್ಲಿ ಪೂರ್ಣ ಯಾಗದ ಮಂಟಪಕ್ಕೆ ತರಲಾಯಿತು. ನಂತರ ವೇದ ಘೋಷ ಗಳೊಂದಿಗೆ ಶತಚಂಡಿ ಯಾಗದ ಪೂರ್ಣಾಹುತಿಯನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೆರವೇರಿಸಿದರು.