ಶಿವಮೊಗ್ಗ – ಭದ್ರಾವತಿ ನಡುವಿನ ಕಾರ್ಗತ್ತಲ ಹೈವೆ..!

ಶಿವಮೊಗ್ಗ, ಆ. 5; ಶಿವಮೊಗ್ಗ ನಗರದ ಹೊರವಲಯ ಮಹಾನಗರ ಪಾಲಿಕೆ 15 ನೇ ವಾರ್ಡ್ ಮಲವಗೊಪ್ಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೀದಿ ದೀಪಗಳು ಹಾಳಾಗಿವೆ. ಸಂಜೆ ವೇಳೆ ಕಾರ್ಗತ್ತಲು ಆವರಿಸುತ್ತಿದೆ. ಇಲ್ಲಿಯವರೆಗೂ ದುರಸ್ತಿಗೆ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.ಶಿವಮೊಗ್ಗ – ಭದ್ರಾವತಿ ನಡುವಿನ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಸೇತುವಾಗಿದೆ. ಈ ಕಾರಣದಿಂದ ಸದರಿ ಹೆದ್ಧಾರಿಯಲ್ಲಿ ಭಾರೀ ಪ್ರಮಾಣದ, ಜನ – ವಾಹನ ದಟ್ಟಣೆಯಿದೆ.ಹೆದ್ದಾರಿ ಅಭಿವೃದ್ದಿ ಕಾಮಗಾರಿ ನಡೆಸುತ್ತಿದ್ದ ವೇಳೆ ಮಾಡಿದ ಎಡವಟ್ಟಿನಿಂದ ಬೀದಿ ದೀಪಗಳು ಆನ್ ಆಗುತ್ತಿಲ್ಲ. ಈಗಾಗಲೇ ರಾಷ್ಟ್ರಿಯ ಹೆದ್ದಾರಿ ಹಾಗೂ ಮಹಾನಗರ ಪಾಲಿಕೆ ಆಡಳಿತದ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೂ ಬೀದಿ ದೀಪಗಳ ದುರಸ್ತಿಗೆ ಕ್ರಮಕೈಗೊಂಡಿಲ್ಲ. ಒಬ್ಬರು ಮತ್ತೊಬ್ಬರ ಮೇಲೆ ಜವಾಬ್ದಾರಿ ಹಾಕಿ ನುಣುಚಿಕೊಳ್ಳುವ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಕಳೆದ ಎರಡು ತಿಂಗಳಿನಿಂದ ಹೆದ್ದಾರಿಯಲ್ಲಿ ಕತ್ತಲ ಸ್ಥಿತಿ ಆವರಿಸಿದೆ ಎಂದು ನಿವಾಸಿಗಳು ಸ್ಥಳೀಯ ಆಕ್ರೋಶ ವ್ಯಕ್ತಪಡಿಸುತ್ತಾರೆ.ಬೀದಿ ದೀಪಗಳ ಅವ್ಯಸ್ಥೆಯಿಂದ, ಸಂಜೆ ವೇಳೆ ಹೆದ್ಧಾರಿಯಲ್ಲಿ ಕಾರ್ಗತ್ತಲು ಆವರಿಸುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಮೂರ್ನಾಲ್ಕು ಬೈಕ್ ಸವಾರರು ಅಪಘಾತಕ್ಕೀಡಾಗಿದ್ದಾರೆ. ನಾಗರೀಕರು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿ ಶ್ರೀಕಾಂತ್ ಎಂಬುವರು ದೂರಿದ್ದಾರೆ.ತಕ್ಷಣವೇ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಸ್ತಿಗೀಡಾಗಿರುವ ಬೀದಿ ದೀಪ ಸರಿಪಡಿಸಬೇಕು. ಈ ಮೂಲಕ ಅಮಾಯಕರು ಸಾವು – ನೋವಿಗೆ ತುತ್ತಾಗದಂತೆ ಎಚ್ಚರವಹಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.