ಕಾಂಗ್ರೆಸ್ ವಿರುದ್ಧ ಶರವಣ ವಾಗ್ದಾಳಿ
ಬೆಂಗಳೂರು, ಸೆ. ೩೦- ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಅವರ ವಿರುದ್ಧ , ಅವರನ್ನು ರಾಜಕೀಯವಾಗಿ ಮುಗಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಸಂಚು ರೂಪಿಸಿದೆ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನಪರಿಷತ್ ಜೆಡಿಎಸ್ ಉಪನಾಯಕ ಟಿ. ಎ.ಶರವಣ ಗಂಭೀರ ಆರೋಪ ಮಾಡಿದ್ದರೆ.
ರಾಜ್ಯದ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು, ಕುಮಾರಸ್ವಾಮಿ ಅವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ಸೃಷ್ಟಿಸಿ, ಕಾನೂನು ಬಲೆಯಲ್ಲಿ ಸಿಲುಕಿಸಲು ಕಾಂಗ್ರೆಸ್ ನಾಯಕರು ನಡೆಸಿರುವ ಪಿತೂರಿಗೆ ಜೆಡಿಎಸ್ ಜಗ್ಗುವುದಿಲ್ಲ ಎಂದು ಶರವಣ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಅವರನ್ನು ನಿಂದಿಸುವ ಪತ್ರ ಬರೆದಿರುವ ಲೋಕಾಯುಕ್ತ ಹಿರಿಯ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಲು ಕ್ರಮ ಕೈಗೊಳ್ಳಬೇಕು. ಎಲ್ಲಿಂದಲೋ ರಾಜ್ಯಕ್ಕೆ ಬಂದು, ಇಲ್ಲಿಯ ಪೊಲೀಸ್ ವ್ಯವಸ್ಥೆಯಲ್ಲಿ ನೆಲೆಯೂರಿ ಇಲ್ಲಿಯ ಚುನಾಯಿತ ನಾಯಕರ ವಿರುದ್ಧವೇ ಪಿತೂರಿ ನಡೆಸಿರುವ ಪೊಲೀಸ್ ಅಧಿಕಾರಿ ಚಂದ್ರಶೇಖರ್ ನಡೆಸುವ ಸುಲಿಗೆಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹ ಪಡಿಸಿದ್ದಾರೆ.
ಹಿಮಾಚಲ ಪ್ರದೇಶದ ಕೇಡರ್ ಅಧಿಕಾರಿಯಾದ ಚಂದ್ರಶೇಖರ್ ಇಷ್ಟೊಂದು ದೀರ್ಘ ಕಾಲ ರಾಜ್ಯದಲ್ಲೇ ನೆಲೆ ಕಂಡು ಕೊಳ್ಳಲು ನೆರವು ನೀಡಿದವರು ಯಾರು. ಚಂದ್ರಶೇಖರ್ ಅವರಿಗೂ ಈ ಪ್ರಭಾವಿ ನಾಯಕರಿಗೂ ಇರುವ ನಂಟೇನು? ಎಂಬುದು ಬಯಲಾಗಬೇಕು ಎಂದು ಶರವಣ ಒತ್ತಾಯಿಸಿದ್ದಾರೆ.
ಒಬ್ಬ ಐಪಿಎಸ್ ಅಧಿಕಾರಿ ತನ್ನ ಸಹೋದ್ಯೋಗಿಗಳಿಗೆ ಕುಮಾರಸ್ವಾಮಿ ವಿರುದ್ಧ ಬರೆಯುವ ಪತ್ರ ಕಾಂಗ್ರೆಸ್ ಕಚೇರಿಯಿಂದ ಹೇಗೆ ಲೀಕ್ ಆಯ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಎಡಿಜಿಪಿ ಚಂದ್ರಶೇಖರ್ ಮಾಡಿರುವ ಆಸ್ತಿಪಾಸ್ತಿ ಬಗ್ಗೆ ತನಿಖೆ ಆಗಬೇಕು. ಒಬ್ಬ ಅಧಿಕಾರಿಯಾಗಿ ಭಾರಿ ಪ್ರಮಾಣದ ಆಸ್ತಿ ಪಾಸ್ತಿ ಮಾಡಿಕೊಳ್ಳಲು ಹೇಗೆ ಕಾರಣ ಆಯಿತು. ಭಾರಿ ಹಣ ವಸೂಲು ಮಾಡಿಕೊಳ್ಳುವ ಜಾಲವನ್ನು ಅವರು ಹೇಗೆ ಸೃಷ್ಟಿ ಸಿಕೊಂಡಿದಿದ್ದರು ಎಂ ಬಗ್ಗೆ ತನಿಖೆ ಆಗಲಿ.ಒಬ್ಬ ಪೋಲಿಸ್ ಅಧಿಕಾರಿಯಿಂದ ೨೦ಕೋಟಿ ರೂಪಾಯಿ ಹಣ ಕೇಳಿದ್ದರೆಂಬ ಬಗ್ಗೆಯೂ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.
ಈ ವಿಚಾರದಲ್ಲಿ ಕೇಂದ್ರ ಸರಕಾರ ಮದ್ಯ ಪ್ರವೇಶಿಸಿ ಅಧಿಕಾರಿ ಮೇಲೆ ಕ್ರಮ ಜರುಗಿಸಲಿ ಎಂದೂ ಅವರು ಮನವಿ ಮಾಡಿದ್ದಾರೆ.