೨೦೧೪ರಲ್ಲಿ ನಾಪತ್ತೆಯಾಗಿದ್ದ ಮಹಿಳೆ ಬೆಂಗಳೂರಿನಲ್ಲಿ ಪತ್ತೆ
ಪಡುಬಿದ್ರಿ-ಅಜ್ಜಿ ಮನೆಗೆಂದು ಹೋಗಿ ನಾಪತ್ತೆಯಾಗಿದ್ದ ಮಹಿಳೆಯೋರ್ವರು ಇದೀಗ ಸುಮಾರು ೧೦ ವರ್ಷಗಳ ಬಳಿಕ ಬೆಂಗಳೂರಿನಲ್ಲಿಪತ್ತೆಯಾಗಿದ್ದಾರೆ.
ಪಲಿಮಾರಿನಲ್ಲಿ ವಾಸವಾಗಿದ್ದ ಶ್ರುತಿ ಶೆಟ್ಟಿ ಅವರು ತನ್ನ ಅಜ್ಜಿ ಮನೆಗೆಂದು ಹೋದವರು ನಾಪತ್ತೆಯಾಗಿದ್ದಾರೆ ಎಂದು ಅವರ ಪತಿ ಶಂಕರ ಶೆಟ್ಟಿ ಅವರು ೨೦೧೪ರಲ್ಲಿ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದ್ದರು. ೨೦೧೬ರಲ್ಲಿ ನಿಶ್ಚಲ ಕಡತ ಸೇರಿದ್ದ ಪ್ರಕರಣವನ್ನು ಪಡುಬಿದ್ರಿ ಠಾಣೆ ಎಎಸ್‌ಐ ರಾಜೇಶ್ ಹಾಗೂ ಹೆಡ್‌ಕಾನ್‌ಸ್ಟೆಬಲ್ ದೇವರಾಜ್ ಇದೀಗ ಬೇಧಿಸಿದ್ದಾರೆ.
ಮಹಿಳೆ ಬೆಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಲ್ಲಿನ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿಯ ಸಹಕಾರದೊಂದಿಗೆ ಶ್ರುತಿ ಶೆಟ್ಟಿ ಅವರನ್ನು ಪಡುಬಿದ್ರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನಿಂದ ಮರಳಿದ ಪೊಲೀಸರು ಪತಿ ಶಂಕರ್ ಶೆಟ್ಟಿ ಅವರನ್ನು ಕರೆಸಿ ಶ್ರುತಿ ಶೆಟ್ಟಿಯ ಭಾವಚಿತ್ರವನ್ನು ತೋರಿಸಿದ್ದಾರೆ. ಈ ವೇಳೆ ಶಂಕರ ಶೆಟ್ಟಿ ಅವರು ಈಕೆ ತನ್ನ ಪತ್ನಿ ಎಂಬುದನ್ನು ಗುರುತಿಸಿದ್ದಾರೆ. ಮಹಿಳೆಯು ಬೆಂಗಳೂರಿನಲ್ಲೇ ಇರುವುದಾಗಿ ಹೇಳಿದ್ದು, ಇದಕ್ಕೆ ಶಂಕರ ಶೆಟ್ಟಿಯೂ ಒಪ್ಪಿಕೊಂಡ ಕಾರಣ, ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ.