ಈಜಲು ನದಿಗಿಳಿದ ಇಬ್ಬರು ನೀರುಪಾಲು
ಮಂಗಳೂರು: ಈಜಲೆಂದು ನದಿಗೆ ಇಳಿದಿದ್ದ ನಾಲ್ವರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಆದಿತ್ಯವಾರ ಸಂಜೆ ಮರವೂರಿನಲ್ಲಿ ನಡೆದಿದೆ.
ನೀರುಪಾಲಾದವರನ್ನು ಕೊಟ್ಟಾರ ಚೌಕಿ ನಿವಾಸಿ ಸುಮಿತ್(೨೦), ಉರ್ವ ಅಂಗಡಿ ನಿವಾಸಿ ಅನೀಶ್ (೧೯) ಎಂದು ತಿಳಿದು ಬಂದಿದೆ. ಕೋಡಿಕಲ್ ನಿವಾಸಿ ಅರುಣ್ (೧೯), ಕೋಡಿಕಲ್ ಮಾಳೂರು ನಿವಾಸಿ ದೀಕ್ಷಿತ್ (೧೮) ಅಪಾಯದಿಂದ ಪಾರಾಗಿದ್ದಾರೆ. ರವಿವಾರ ಸಂಜೆ ೪ ಗಂಟೆಯ ಸುಮಾರಿಗೆ ನಾಲ್ವರು ಸ್ನೇಹಿತರು ಮರವೂರು ಸೇತುವೆಯ ಅಡಿಯಲ್ಲಿ ನದಿಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಸುಮಿತ್ ಮತ್ತು ಅನೀಶ್ ನೀರಿನ ಆಳ ತಿಳಿಯದೆ ಇಳಿದ ಪರಿಣಾಮ ಇಬ್ಬರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ. ನೀರು ಪಾಲಾಗಿರುವವರಿಗಾಗಿ ಆಗಿ ಶಾಮಕ ದಳದ ಸಿಬ್ಬಂದಿ, ಈಜು ತಜ್ಞರ ತಂಡ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಘಟನೆಗೆ ಸಂಬಂಧಿಸಿ ಬಜ್ಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.