ಮಂಗಳೂರಿನಲ್ಲಿ ಸ್ಕೂಟರ್ನಲ್ಲಿ ಹಾವು ಸವಾರನಿಗೆ ಕಚ್ಚಿದೆ!
ಕೈಕಂಬ: ದ್ವಿಚಕ್ರ ವಾಹನದ ಸೀಟಿನ ಕೆಳಗಡೆ ನುಸುಳಿ ಕೂತಿದ್ದ ಕನ್ನಡಿ ಹಾವು ವಾಹನ ಸವಾರನಿಗೆ ಕಚ್ಚಿದ ಘಟನೆ ಕುಪ್ಪೆಪದವಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಪ್ಪೆಪದವಿನನಲ್ಲಿ ಸೈಬರ್ ಸೆಂಟರ್ ನಡೆಸುತ್ತಿರುವ ಇಮ್ತಿಯಾಜ್ ಅವರು ಹಾವು ಕಡಿತಕ್ಕೆ ಒಳಗಾದವರು. ಅವರು ಸೆ. ೨೭ರಂದು ರಾತ್ರಿ ಕೆಲಸ ಮುಗಿಸಿ ಮಸೀದಿಗೆ ಹೋಗಿ ಅಲ್ಲಿಂದ ಮನೆಗೆ ತೆರಳಲು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಳಿ ಬಂದು ಸ್ಕೂಟರ್‌ನ ಸೀಟ್ ತೆರೆದು ಕಾಗದ ಪತ್ರಗಳನ್ನು ಇಡುವ ಸಂದರ್ಭದಲ್ಲಿ ಸೀಟಿನ ಕೆಳಗಡೆಯಿದ್ದ ಹಾವು ಬೆರಳಿಗೆ ಕಚ್ಚಿತ್ತು. ಇಮ್ತಿಯಾಜ್ ಅವರನ್ನು ತತ್‌ಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.