ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ.4: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, 23 ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು, ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.ಶಿವಮೊಗ್ಗ ಅಶೋಕ ನಗರ ಬಡಾವಣೆ ನಿವಾಸಿ ಇಬ್ರಾಹಿಂ ಯಾನೆ ಇಬ್ಬು (30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆಗಸ್ಟ್ 1 ರಂದು ಆರೋಪಿಯನ್ನು ಪೊಲೀಸರು ಬಂಧಿಸಿ, 2 ನೇ ಜೆಎಂಎಫ್’ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.ಸಾಲುಸಾಲು ಕೇಸ್ : ಆರೋಪಿ ವಿರುದ್ದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 11, ವಿನೋಬನಗರ ಠಾಣೆಯಲ್ಲಿ 3, ತುಂಗಾನಗರ ಠಾಣೆಯಲ್ಲಿ 2, ಕುಂಸಿ ಠಾಣೆಯಲ್ಲಿ 1, ಸಾಗರ ಗ್ರಾಮಾಂತರ ಠಾಣೆಯಲ್ಲಿ 5 ಹಾಗೂ ಟೌನ್ ಠಾಣೆಯಲ್ಲಿ1 ಪ್ರಕರಣ ಸೇರಿದಂತೆ ಒಟ್ಟಾರೆ 23 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಂಬಂಧ ದೂರುಗಳು ದಾಖಲಾಗಿದ್ದವು!ಆದರೆ ಆರೋಪಿಯು ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಆರೋಪಿಯ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು.ದೊಡ್ಡಪೇಟೆ ಠಾಣೆ ಇನ್ಸ್’ಪೆಕ್ಟರ್ ರವಿ ಪಾಟೀಲ್, ಮತ್ತವರ ಸಿಬ್ಬಂದಿಗಳಾದ ಸಿಹೆಚ್’ಸಿ ರುದ್ರೇಶ್, ಮಂಜಪ್ಪ, ಸಿಪಿಸಿಗಳಾದ ರವೀಂದ್ರ ಪ್ರಸಾದ್, ಮಂಜುನಾಥ್ ನಾಯ್ಕ್ ಅವರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಸದರಿ ತಂಡದ ಕಾರ್ಯವನ್ನು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಶ್ಲಾಘಿಸಿದ್ದಾರೆ.