ಹಿರಿಯರ ಆದರ್ಶ ಪಕ್ಷಕ್ಕೆ ನೆಲೆ ಒದಗಿಸಿದೆ :ಬಿ.ಎಲ್ ಸಂತೋಷ್
ಕಲಬುರಗಿ:ಆ.4: ಜನ ಸಂಘದಿಂದ ಬೆಳೆದು ಬಂದ ಹಿರಿಯ ಕಾರ್ಯಕರ್ತರು ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಆದರ್ಶಗಳ ಮೂಲಕ ಭದ್ರ ನೆಲೆಗಟ್ಟನ್ನು ನೀಡಿರುವುದರಿಂದ ಪಕ್ಷ ಇವತ್ತು ಇಷ್ಟು ವಿರಾಜಮಾನವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅಭಿಪ್ರಾಯ ಪಟ್ಟರು.
ಕಲ್ಬುರ್ಗಿಯಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತ, ಸಾಹಿತಿ 94 ರ ಹರೆಯದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಮಹಾದೇವಪ್ಪ ಅವರನ್ನು ಕಲ್ಬುರ್ಗಿಯ ಅವರ ಸ್ವಗೃಹದಲ್ಲಿ ಆಗಸ್ಟ್ 3ರಂದು ಭೇಟಿಯಾಗಿ ಸನ್ಮಾನಗೈದು ಮಾತನಾಡಿ ಹಿರಿಯರ ಸಮರ್ಪಣಾ ಮನೋಭಾವದಿಂದ ಮಾದರಿಯಾಗಿ ಪಕ್ಷ ಬೆಳೆಯಲು ಭದ್ರ ತಳಪಾಯ ಒದಗಿಸಿಕೊಟ್ಟ ಹಿರಿಯರು ಅಭಿನಂದನೆಗೆ ಅರ್ಹರು. ಅವರು ಪಕ್ಷಕ್ಕೆ ಸದಾ ಮಾರ್ಗದರ್ಶನ ನೀಡಿ ಆಶೀರ್ವದಿಸುತ್ತಿದ್ದಾರೆ. ಈಗಿನ ನಾಯಕರು ಅವರಿಂದ ಪ್ರೇರಣೆ ಪಡೆದು ಪಕ್ಷಕ್ಕೆ ಶಕ್ತಿ ತುಂಬಬೇಕು. ಮಹದೇವಪ್ಪ ಕಡೇಚೂರ್ ಅವರದು ಅವಿಭಕ್ತ ಕುಟುಂಬವಾಗಿದ್ದು 25 ಜನರು ಒಂದೇ ಮನೆಯಲ್ಲಿ ಆದರ್ಶದ ಜೀವನ ಮಾಡುತ್ತಿರುವುದು ಭಾರತೀಯ ಕುಟುಂಬ ಪದ್ಧತಿಯ ಆದರ್ಶ ಎಂದು ಹೇಳಿದರು.
ಮಹಾದೇವಪ್ಪ ಕಡೇಚೂರ್ ಅಭಿನಂದನೆಗೆ ಪ್ರತ್ಯುತ್ತರ ನೀಡುತ್ತಾ ರಾಷ್ಟ್ರಮಟ್ಟದ ನಾಯಕರು ಹಿರಿಯ ಕಾರ್ಯಕರ್ತರನ್ನು ಹುಡುಕಿಕೊಂಡು ಮನೆಗೆ ಬಂದು ಗೌರವಿಸಿರುವುದು ನಿಷ್ಠಾವಂತರಾಗಿ ದುಡಿದ ಪಕ್ಷದ ಕಾರ್ಯಕರ್ತನಿಗೆ ರಾಷ್ಟ್ರ ನಾಯಕರು ನೀಡುವ ಅತ್ಯಮೂಲ್ಯವಾದ ಗೌರವ ವಾಗಿದೆ.ತತ್ವನಿಷ್ಟ ರಾಗಿ ಪ್ರಾಮಾಣಿಕರಾಗಿ ನಾಯಕರೆಲ್ಲರೂ ಬಿಜೆಪಿ ಪಕ್ಷದ ಮೂಲಕ ರಾಷ್ಟ್ರ ಕಟ್ಟುವ ಕೆಲಸ ಮಾಡುವಂತಾಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನೇತಾರ ಶರಣಪ್ಪ ತಳವಾರ, ಆರ್ ಎಸ್ ಎಸ್ ನ ವಿಭಾಗಿಯ ಸಂಘಟನಾ ಕಾರ್ಯದರ್ಶಿ ವಿಜಯ ಮಹಾಂತೇಶ್, ಸಂಜೀವ ಭೋಸಗೀಕರ್,ಭರತ್ ಖಮಿತ್ ಕರ್,ಮಹೇಶ್ ಕಡೇಚೂರ್, ಡಾ.ಸದಾನಂದ ಪೆರ್ಲ,ಪ್ರಮೀಳಾ ಎಂ ಕೆ.,ದಿನೇಶ್ ಕಡೇಚೂರ್,
ಅನೀಶ್ ಕಡೇ ಚೂರ್ ಮತ್ತಿತರರು ಇದ್ದರು.